ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಡಮಾನ್‌–ನಿಕೋಬಾರ್‌ ಮುಖ್ಯ ಕಾರ್ಯದರ್ಶಿ ಅಮಾನತು; ಲೆ. ಗವರ್ನರ್‌ಗೆ ₹5 ಲಕ್ಷ ದಂಡ

Published 4 ಆಗಸ್ಟ್ 2023, 5:35 IST
Last Updated 4 ಆಗಸ್ಟ್ 2023, 5:35 IST
ಅಕ್ಷರ ಗಾತ್ರ

ಪೋರ್ಟ್‌ ಬ್ಲೇಯರ್‌: ದಿನಗೂಲಿ ಕಾರ್ಮಿಕರಿಗೆ ಹೆಚ್ಚಿನ ವೇತನ ಹಾಗೂ ತುಟ್ಟಿ ಭತ್ಯೆ ಪಾವತಿ ಮಾಡಬೇಕು ಎನ್ನುವ ತನ್ನ ಆದೇಶ ಉಲ್ಲಂಘಿಸಿದ ಅಂಡಮಾನ್ ನಿಕೋಬಾರ್‌ ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿ ಕೇಶವ್‌ ಚಂದ್ರ ಅವರನ್ನು ಕೋಲ್ಕತ್ತ ಹೈಕೋರ್ಟ್‌ನ ಪೋರ್ಟ್‌ ಬ್ಲೇಯರ್‌ ಪೀಠ ಅಮಾನತು ಮಾಡಿದೆ. ಅಲ್ಲದೆ ಲೆಫ್ಟಿನೆಂಟ್‌ ಗವರ್ನರ್‌ ಡಿ.ಕೆ ಜೋಶಿಗೆ ₹5 ಲಕ್ಷ ದಂಡ ವಿಧಿಸಿದೆ.

ಕೇಂದ್ರಾಡಳಿತ ಪ್ರದೇಶದ ಆಡಳಿತದಡಿಯಲ್ಲಿದ್ದ ಸುಮಾರು 4 ಸಾವಿರ ದಿನಗೂಲಿ ಕಾರ್ಮಿಕರಿಗೆ (Daily Rated Mazdoors) ವೇತನ ಹಾಗೂ ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಕಳೆದ ವರ್ಷ ಡಿಸೆಂಬರ್‌ 19ರಂದು ಆದೇಶಿಸಿತ್ತು. ಆದರೆ ಅದನ್ನು ಪಾವತಿ ಮಾಡಲು ಆಡಳಿತ ವಿಫಲವಾಗಿತ್ತು.

ಪ್ರಕರಣದಲ್ಲಿ ಮುಖ್ಯ ಕಾರ್ಯದರ್ಶಿ ಹಾಗೂ ಲೆಫ್ಟಿನೆಂಟ್ ಗವರ್ನರ್‌ ಅವರು ತಪ್ಪಿತಸ್ಥರು ಎಂದು ಹೇಳಿರುವ ಕೋರ್ಟ್, ಮುಖ್ಯ ಕಾರ್ಯದರ್ಶಿಯವರನ್ನು ಅಮಾನತು ಮಾಡಿ ಲೆಫ್ಟಿನೆಂಟ್‌ ಗವರ್ನರ್‌ಗೆ ದಂಡ ವಿಧಿಸಿದೆ.

ಅಂಡಮಾನ್ ನಿಕೋಬಾರ್‌ ಆಡಳಿತದ ಸುಮಾರು 4 ಸಾವಿರ ಮಂದಿ ದಿನಗೂಲಿ ನೌಕರರು 1986ರ ಸುಪ್ರೀಂ ಕೋರ್ಟ್‌ ತೀರ್ಪಿನ ಅನ್ವಯ ಸಿಗಬೇಕಾದ ವೇತನ ಹಾಗೂ ತುಟ್ಟಿ ಭತ್ಯೆ ಪಡೆಯುತ್ತಿರಲಿಲ್ಲ. 2022ರ ಸೆಪ್ಟೆಂಬರ್‌ 22 ರಂದು ಆಯ್ದ ಕೆಲ ದಿನಗೂಲಿ ಕಾರ್ಮಿಕರಿಗೆ ವೇತನ ಹಾಗೂ ತುಟ್ಟಿ ಭತ್ಯೆಯನ್ನು ಆಡಳಿತ ಹೆಚ್ಚಳ ಮಾಡಿತ್ತು. ಇದನ್ನು ಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಾಗಿತ್ತು. ಇದಾದ ಬಳಿಕ 2023 ಮೇ 9 ರಿಂದ ಅನ್ವಯವಾಗುವಂತೆ ಉಳಿದ ನೌಕರರಿಗೂ ವೇತನ ಹೆಚ್ಚಳ ಮಾಡುವುದಾಗಿ ಆಡಳಿತ ಘೋಷಿಸಿತ್ತು.

ಮುಖ್ಯ ಕಾರ್ಯದರ್ಶಿ ಹಾಗೂ ಲೆಫ್ಟಿನೆಂಟ್‌ ಗವರ್ನರ್‌ ಅವರ ಈ ನಡೆ ನ್ಯಾಯಾಂಗ ನಿಂದನೆ ಎಂದು ಬಗೆದಿರುವ ಕೋರ್ಟ್‌, ಈ ಕ್ರಮ ತೆಗೆದುಕೊಂಡಿದೆ.

ಆಡಳಿತ ಈ ನಡವಳಿಕೆಯನ್ನು ಗಮನದಲ್ಲಿಟ್ಟುಕೊಂಡು, ಅಂಡಮಾನ್ ಮತ್ತು ನಿಕೋಬಾರ್ ಆಡಳಿತದ ಮುಖ್ಯ ಕಾರ್ಯದರ್ಶಿ ಕೇಶವ ಚಂದ್ರ ಅವರನ್ನು ತಕ್ಷಣವೇ ಅಮಾನತುಗೊಳಿಸುವಂತೆ ನಿರ್ದೇಶಿಸುವುದನ್ನು ಬಿಟ್ಟು ಈ ನ್ಯಾಯಾಲಯವು ಯಾವುದೇ ಆಯ್ಕೆ ಇಲ್ಲ. ನಂತರದ ಹಿರಿಯ ಅಧಿಕಾರಿ ಮುಖ್ಯ ಕಾರ್ಯದರ್ಶಿಯ ಕೆಲಸವನ್ನು ವಹಿಸಿಕೊಳ್ಳಲಿದ್ದಾರೆ ಎಂದು ಎಂದು ನ್ಯಾಯಮೂರ್ತಿ ರಾಜಶೇಖರ್ ಮಂಥಾ ಮತ್ತು ನ್ಯಾಯಮೂರ್ತಿ ಬಿಭಾಸ್ ರಂಜನ್ ಡೆ ಅವರು ಹೊರಡಿಸಿದ ಆದೇಶದಲ್ಲಿ ಹೇಳಲಾಗಿದೆ.

ಅಲ್ಲದೆ ಲೆಫ್ಟಿನೆಂಟ್‌ ಗವರ್ನರ್‌ ಅವರ ನಡವಳಿಕೆಯನ್ನು ಗಮನಿಸಿ, ಅವರ ಸ್ವಂತ ನಿಧಿಯಿಂದ ₹ 5 ಲಕ್ಷವನ್ನು ಕೋಲ್ಕತ್ತ ಹೈಕೋರ್ಟ್‌ನ ಪೋರ್ಟ್ ಬ್ಲೇರ್ ಪೀಠದ ರಿಜಿಸ್ಟ್ರಾರ್‌ನಲ್ಲಿ 7 ದಿನಗಳ ಒಳಗಾಗಿ ಠೇವಣಿ ಇಡುವಂತೆ ಕೋರ್ಟ್‌ ನಿರ್ದೇಶಿಸುತ್ತದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT