ಲಖನೌ: ‘ಕೋಮು ದ್ವೇಷಕ್ಕೆ ಕುಮ್ಮಕ್ಕು’ ನೀಡಿದ ಆರೋಪದಲ್ಲಿ ಟ್ವಿಟರ್ ವಿರುದ್ಧ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಪ್ರಕರಣ ದಾಖಲಾಗಿದೆ.
ಟ್ವಿಟರ್ ಸಂಸ್ಥೆಯು ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಅನುಸರಿಸದ ಕಾರಣಕ್ಕೆ ಕಾನೂನು ರಕ್ಷಣೆ ನಷ್ಟವಾದ ಬಳಿಕ ದಾಖಲಾದ ಮೊದಲ ಪ್ರಕರಣ ಇದು.
ಪತ್ರಕರ್ತೆ ಸಬಾ ನಖ್ವಿ, ಸುದ್ದಿ ಪೋರ್ಟಲ್ ‘ದಿ ವೈರ್’ ಮತ್ತು ಟ್ವಿಟರ್ ಅಧಿಕಾರಿಗಳು ಸೇರಿ 9 ಮಂದಿಯ ವಿರುದ್ಧ ದೂರು ದಾಖಲಿಸಲಾಗಿದೆ.
ಅಬ್ದುಲ್ ಸಮದ್ ಎಂಬ ವ್ಯಕ್ತಿಯ ಗಡ್ಡ ಕತ್ತರಿಸಿ, ಹಲ್ಲೆ ನಡೆಸಿ, ‘ಜೈಶ್ರೀರಾಂ’ ಎಂದು ಘೋಷಣೆ ಕೂಗಲು ಬಲವಂತ ಮಾಡಿದ ಪ್ರಕರಣ ಗಾಜಿಯಾಬಾದ್ ಜಿಲ್ಲೆಯ ಲೋನಿ ಎಂಬಲ್ಲಿ ಇದೇ 5ರಂದು ನಡೆದಿದೆ ಎಂದು ಹೇಳಲಾಗಿತ್ತು.
ಸಮದ್ ಅವರು ‘ತವಿಜ್’ ಎಂಬ ದಾರ ತಯಾರಿಸುತ್ತಾರೆ. ಅದಕ್ಕೆ ಮಾಂತ್ರಿಕ ಶಕ್ತಿಯಿದೆ ಎಂದು ಹೇಳಲಾಗುತ್ತದೆ. ಪರ್ವೇಶ್ ಗುಜ್ಜರ್ ಎಂಬ ವ್ಯಕ್ತಿಗೆ ಸಮದ್ ಅವರು ದಾರ ತಯಾರಿಸಿ ಕೊಟ್ಟಿದ್ದರು. ಆದರೆ, ತವಿಜ್ ತಮಗೆ ಬೇಕಾದಂತೆ ಇಲ್ಲ ಎಂಬ ಕಾರಣಕ್ಕೆ ಗುಜ್ಜರ್ ಮತ್ತು ಇತರರು ಸಮದ್ ಮೇಲೆ ಹಲ್ಲೆ ನಡೆಸಿದ್ದರು.
ಈ ಪ್ರಕರಣಕ್ಕೆ ಕೋಮು ಬಣ್ಣ ಬಳಿಯುವ ಉದ್ದೇಶಪೂರ್ವಕ ಯತ್ನ ನಡೆದಿತ್ತು ಎಂದು ಪೊಲೀಸರು ಹೇಳಿದ್ದಾರೆ. ‘ಸುಳ್ಳು ಸುದ್ದಿ ಎಂದು ಸಾಬೀತಾದ ಬಳಿಕವೂ ಸುದ್ದಿಯನ್ನು ಅಳಿಸಿ ಹಾಕಲು ಟ್ವಿಟರ್ ಮುಂದಾಗಲಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಥಳೀಯ ರಾಜಕಾರಣಿಯೊಬ್ಬರ ಕುಮ್ಮಕ್ಕಿನಿಂದ ಸಮದ್ ಸುಳ್ಳು ದೂರು ನೀಡಿದ್ದರು. ‘ಘಟನೆ ನಡೆದು ಒಂಬತ್ತು ದಿನಗಳ ಬಳಿಕ ವಿಡಿಯೊ ವೈರಲ್ ಆಗಿತ್ತು. ಧಾರ್ಮಿಕ ಘೋಷಣೆ ಕೂಗುವಂತೆ ತಮ್ಮನ್ನು ಬಲವಂತ ಮಾಡಿಲ್ಲ ಎಂದು ಸಮದ್ ಹೇಳಿದ್ದರು’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.