ಬರಾಸತ್(ಪಶ್ಚಿಮ ಬಂಗಾಳ): ಸಂದೇಶ್ಖಾಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಶಹಜಹಾನ್ ಶೇಖ್ ಸಹೋದರ ಹಾಗೂ ಆತನ ಸಹಚರನ ಸಿಬಿಐ ಕಸ್ಟಡಿ ಅವಧಿಯನ್ನು ಮತ್ತೆ ಐದು ದಿನಗಳ ಕಾಲ ವಿಸ್ತರಿಸಿ ಇಲ್ಲಿನ ಉತ್ತರ 24 ಪರಗಣ ಜಿಲ್ಲಾ ನ್ಯಾಯಾಲಯವು ಆದೇಶಿಸಿದೆ.
ಶಹಜಹಾನ್ ಶೇಖ್ನ ಸಹೋದರ ಶೇಖ್ ಅಲಂಗೀರ್ ಮತ್ತು ಆತನ ಸಹಚರ ಮಫಿಜುರ್ ಮೊಲ್ಲಾ ಅವರನ್ನು ಮತ್ತೆ ಸಿಬಿಐ ಕಸ್ಟಡಿಗೆ ನೀಡಲಾಗಿದೆ.
ಇದೇ ಮಾರ್ಚ್22ರಂದು ಒಂಬತ್ತು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಲಾಗಿತ್ತು. ಇಂದು (ಭಾನುವಾರ) ಕಸ್ಟಡಿ ಅವಧಿ ಅಂತ್ಯಗೊಂಡ ನಂತರ ಶೇಖ್ ಅಲಂಗೀರ್ ಮತ್ತು ಮಫಿಜುರ್ ಮೊಲ್ಲಾ ಅವರನ್ನು ನ್ಯಾಯಾಲಯ ಮುಂದೆ ಹಾಜರುಪಡಿಸಲಾಯಿತು.
ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ಮೇಲೆ ನಡೆದ ದಾಳಿ ಪ್ರಕರಣದ ಸಂಬಂಧ ತೃಣಮೂಲ ಕಾಂಗ್ರೆಸ್ನಿಂದ (ಟಿಎಂಸಿ) ಅಮಾನತುಗೊಂಡಿರುವ ಮುಖಂಡ ಶಹಜಹಾನ್ ಶೇಖ್ ಹಾಗೂ ಅವರ ಒಂಬತ್ತು ಮಂದಿ ಆಪ್ತರಿಗೆ ಸಿಬಿಐ ಸಮನ್ಸ್ ಜಾರಿ ಮಾಡಿತ್ತು.
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಮತ್ತು ಸ್ಥಳೀಯರ ಭೂಮಿ ಕಬಳಿಸಿರುವ ಆರೋಪ ಶಜಹಾನ್ ಶೇಖ್ ಮೇಲಿದೆ.
ಭಾರಿ ಸಂಖ್ಯೆಯ ಮಹಿಳೆಯರು ಟಿಎಂಸಿ ನಾಯಕ ಶಹಜಹಾನ್ ಶೇಖ್ ಹಾಗೂ ಆತನ ಬೆಂಬಲಿಗರು, ಬಲವಂತವಾಗಿ ತಮ್ಮ ಭೂಕಬಳಿಕೆ ಮಾಡಿದ್ದಾರೆ ಮತ್ತು ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿದ್ದರು. ಅದಾದ ಬಳಿಕ, 'ಉತ್ತರ 24 ಪರಗಣ' ಜಿಲ್ಲೆಯ ಸಂದೇಶ್ಖಾಲಿಯಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.