ರಾಂಚಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರೈತರಿಗೆ ವಿಶ್ವಾಸದ್ರೋಹ ಬಗೆಯುತ್ತಿದೆ ಮತ್ತು ಅವರ ಹಕ್ಕುಗಳನ್ನು ನಿರಾಕರಿಸುತ್ತಿದೆ ಎಂದು ಸಿಪಿಎಂ ಹಿರಿಯ ನಾಯಕಿ ಬೃಂದಾ ಕಾರಟ್ ಮಂಗಳವಾರ ಕಿಡಿಕಾರಿದರು.
ರಾಷ್ಟ್ರ ರಾಜಧಾನಿಯತ್ತ ಹೊರಟಿದ್ದ ಸಾವಿರಾರು ರೈತರನ್ನು ಅಧಿಕಾರಿಗಳು ಗಡಿಗಳಲ್ಲಿ ತಡೆದ ಬೆನ್ನಲ್ಲೇ ಈ ಹೇಳಿಕೆ ನೀಡಿದರು.
‘ಅವರು (ಕೇಂದ್ರ ಸರ್ಕಾರ) ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕಾನೂನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಏಕೆ ಹೇಳುತ್ತಿದ್ದಾರೆ?’ ಎಂದು ಪ್ರಶ್ನಿಸಿದರು.
ಇದೇ ಸಂದರ್ಭದಲ್ಲಿ, ‘ಕೇಂದ್ರ ಸರ್ಕಾರವು ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಅವರಿಗೆ ಬಹಳ ತಡವಾಗಿ ಭಾರತ ರತ್ನ ಘೋಷಿಸಿತು. ಅವರು ರೈತರ ಹಕ್ಕುಗಳ ಪರವಾಗಿದ್ದರು. ಅನ್ನದಾತರ ಅನುಕೂಲಕ್ಕಾಗಿ ಅವರ ನೇತೃತ್ವದ ಆಯೋಗವು ನೀಡಿದ್ದ ಶಿಫಾರಸುಗಳನ್ನು ಇನ್ನೂ ಜಾರಿ ಮಾಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.