ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ತೀಸ್‌ಗಡ: ದಹನವಾಗದ ರಾವಣನ 10 ತಲೆಗಳು– ಪಾಲಿಕೆ ಸಿಬ್ಬಂದಿ ಅಮಾನತು

Last Updated 7 ಅಕ್ಟೋಬರ್ 2022, 10:01 IST
ಅಕ್ಷರ ಗಾತ್ರ

ರಾಯ್‌ಪುರ: ದಸರಾ ಆಚರಣೆ ಸಂದರ್ಭ ಪ್ರತಿಕೃತಿ ದಹನದ ವೇಳೆ ರಾವಣನ 10 ತಲೆಗಳು ದಹನವಾಗದೇ ಉಳಿದಿದ್ದರಿಂದ ಪಾಲಿಕೆಯ ಗುಮಾಸ್ತನನ್ನು ಅಮಾನತು ಮಾಡಿ, ನಾಲ್ವರು ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಿರುವ ಘಟನೆ ಛತ್ತೀಸ್‌ಗಡದ ಧಮ್ತಾರಿಯಲ್ಲಿ ನಡೆದಿದೆ.

ಅಕ್ಟೋಬರ್ 5ರಂದು ರಾಮಲೀಲಾ ಮೈದಾನದಲ್ಲಿ ನಡೆದ ರಾವಣ ಪ್ರತಿಕೃತಿ ದಹನದ ಚಿತ್ರಗಳಲ್ಲಿ ರಾಕ್ಷಸ ರಾಜನ ರುಂಡಗಳು ಹಾಗೇ ಉಳಿದಿದ್ದು, ಮುಂಡವು ಬೂದಿಯಾಗಿರುವುದು ಕಂಡು ಬಂದಿದೆ.

ದಸರಾ ಅಥವಾ ವಿಜಯದಶಮಿಯು ವಾರ್ಷಿಕ ದುರ್ಗಾಪೂಜಾ ಉತ್ಸವದ ಅಂತ್ಯವನ್ನು ಸೂಚಿಸುತ್ತದೆ. ಇದರಲ್ಲಿ ದುಷ್ಟರ ವಿರುದ್ಧ ಒಳ್ಳೆಯತನದ ವಿಜಯದ ಸಂಕೇತವಾಗಿ ರಾವಣನ ಪ್ರತಿಕೃತಿಗಳನ್ನು ದೇಶದ ಹಲವೆಡೆ ದಹಿಸಲಾಗುತ್ತದೆ.

ಅದರಂತೆ, ಧಮ್ತಾರಿಯಲ್ಲಿ ಸ್ಥಳೀಯಾಡಳಿತದಿಂದ ರಾವಣನ ಪ್ರತಿಕೃತಿ ದಹನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ರಾವಣನ ಮೂರ್ತಿ ತಯಾರಿಕೆಯಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಗುಮಾಸ್ತ ರಾಜೇಂದ್ರ ಯಾದವ್ ಅವರನ್ನು ಅಮಾನತುಗೊಳಿಸಿ ಧಮ್ತಾರಿ ಮುನ್ಸಿಪಲ್ ಕಾರ್ಪೊರೇಷನ್ (ಡಿಎಂಸಿ) ಆದೇಶಿಸಿದೆ.

2022ರ ದಸರಾ ಆಚರಣೆಗಾಗಿ ರಾವಣನ ಪ್ರತಿಮೆ ತಯಾರಿಸುವಲ್ಲಿ ಯಾದವ್ ಅವರು ಗಂಭೀರ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಜೊತೆಗೆ, ಪಾಲಿಕೆಯ ಸಹಾಯಕ ಎಂಜಿನಿಯರ್ ವಿಜಯ್ ಮೆಹ್ರಾ ಮತ್ತು ಉಪ ಎಂಜಿನಿಯರ್‌ಗಳಾದ ಲೋಮಸ್ ದೇವಾಂಗನ್, ಕಮಲೇಶ್ ಠಾಕೂರ್ ಮತ್ತು ಕಮತಾ ನಾಗೇಂದ್ರ ಎಂಬ ನಾಲ್ವರು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT