ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಉಗ್ರರು ಸರ್ಕಸ್ ಕಲಾವಿದನ ಮೇಲೆ ಗುಂಡಿನ ದಾಳಿ ಮಾಡಿ ಹತ್ಯೆಗೈದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಜಮ್ಮುವಿನ ಉಧಂಪುರ ನಿವಾಸಿ ದೀಪು ಹತ್ಯೆಯಾದ ಸರ್ಕಸ್ ಕಲಾವಿದ. ಇವರು ಅನಂತನಾಗ್ನ ಜಂಗ್ಲಾಟ್ ಮಂಡಿಯ ಸಮೀಪದ ಅಮ್ಯೂಸ್ಮೆಂಟ್ ಪಾರ್ಕ್ನಲ್ಲಿ ಖಾಸಗಿ ಸರ್ಕಸ್ ಮೇಳದಲ್ಲಿ ಕೆಲಸ ಮಾಡುತ್ತಿದ್ದರು. ಇವರು ರಾತ್ರಿ 8.30ರ ಸುಮಾರಿಗೆ ಹಾಲು ಖರೀದಿಸಲು ಮಾರುಕಟ್ಟೆಗೆ ಹೋಗಿದ್ದಾಗ, ಬೈಕಿನಲ್ಲಿ ಬಂದ ಇಬ್ಬರು ಉಗ್ರರು ಸಮೀಪದಿಂದ ಗುಂಡು ಹಾರಿಸಿದ್ದಾರೆ. ಗಾಯಗೊಂಡಿದ್ದ ಕಲಾವಿದ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್-ಎ-ತಯಬಾದ ನಂಟಿರುವ ‘ಕಾಶ್ಮೀರ್ ಫ್ರೀಡಂ ಫೈಟರ್’ ಎಂಬ ಉಗ್ರ ಸಂಘಟನೆಯು ಈ ಹತ್ಯೆಯ ಹೊಣೆ ಹೊತ್ತಿದೆ.