ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು 'ಶಿವಸಂಕಲ್ಪ ಅಭಿಯಾನ'ದ ಭಾಗವಾಗಿ ರಾಜ್ಯದ 48 ಕ್ಷೇತ್ರಗಳಲ್ಲಿ ಪ್ರವಾಸ ಮಾಡುವುದಾಗಿ ಘೋಷಿಸುವ ಮೂಲಕ ಲೋಕಸಭೆ ಚುನಾವಣಾ ಪ್ರಚಾರಕ್ಕೆ ಗುರುವಾರ ಚಾಲನೆ ನೀಡಿದರು.
ವಿಡಿಯೊ ಕಾನ್ಫರೆನ್ಸ್ ಮೂಲಕ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಿಂದೆ, 2024ರ ಲೋಕಸಭೆ ಚುನಾವಣೆಗೆ ತಯಾರಿ ನಡೆಸುವಂತೆ ಮನವಿ ಮಾಡಿದರು.
ಶಿವಸೇನೆ( ಏಕನಾಥ ಶಿಂದೆ ಬಣ), ಭಾರತೀಯ ಜನತಾ ಪಕ್ಷ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ(ಎನ್ಸಿಪಿ) ಅಜಿತ್ ಪವಾರ್ ಬಣವನ್ನು ಒಳಗೊಂಡಿರುವ ಆಡಳಿತಾರೂಢ ಮೈತ್ರಿಕೂಟ ಅಥವಾ 'ಮಹಾಯುತಿ' ಅಭ್ಯರ್ಥಿಗಳ ಪರ ಪ್ರಚಾರ ಮಾಡುವಂತೆ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
'ಶಿವಸಂಕಲ್ಪ ಅಭಿಯಾನವು ಜನವರಿ 6 ರಿಂದ ಯವತ್ಮಾಲ್-ವಾಶಿಮ್ ಕ್ಷೇತ್ರದಿಂದ ಪ್ರಾರಂಭವಾಗಲಿದೆ. ಮುಂದಿನ ತಿಂಗಳಲ್ಲಿ, ಶಿಂದೆ ಅವರು ರಾಜ್ಯದ ವಿವಿಧ ಪ್ರದೇಶಗಳನ್ನು ಒಳಗೊಂಡಂತೆ ಇನ್ನೂ 15 ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ' ಎಂದು ಶಿವಸೇನೆ ತಿಳಿಸಿದೆ.