ಉನ್ನತ ನಿರ್ಧಾರ ತೆಗೆದುಕೊಳ್ಳುವ ‘ಕಾಂಗ್ರೆಸ್ ಕಾರ್ಯಕಾರಿ ಸಮಿತಿ’ ಸಭೆ (ಸಿಡಬ್ಲ್ಯುಸಿ) ಉದ್ದೇಶಿಸಿ ಸೋಮವಾರ ಮಾತನಾಡಿದ ಅವರು, ಪಕ್ಷದ ತಕ್ಷಣದ ಪುನರುಜ್ಜೀವನಕ್ಕೆ ಯಾವುದೇ ಮಂತ್ರದಂಡವಿಲ್ಲ. ನಿಸ್ವಾರ್ಥ ಕೆಲಸ, ಶಿಸ್ತು, ಜಾಗೃತ ಪ್ರಜ್ಞೆಯಿಂದ ಇದು ಸಾಧ್ಯ ಎಂದರು. ‘ಚಿಂತನ ಶಿಬಿರವು ಕೇವಲ ಒಂದು ಆಚರಣೆ ರೀತಿ ಆಗಬಾರದು. ಮುಂದಿರುವ ಸೈದ್ಧಾಂತಿಕ, ಚುನಾವಣಾ ಸವಾಲುಗಳನ್ನು ಎದುರಿಸುವ ದಿಸೆಯಲ್ಲಿ ಶಿಬಿರವು ಪಕ್ಷದ ಪುನರ್ ಸಂಘಟನೆಗೆ ಮಾರ್ಗ ಹಾಕಿಕೊಡಬೇಕು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.