ನವದೆಹಲಿ: ‘ಹಿಮಾಲಯ ಪ್ರದೇಶದಲ್ಲಿ ಭಾರಿ ಭೂಕುಸಿತ ಹಾಗೂ ಮೇಘಸ್ಫೋಟದಂತಹ ನೈಸರ್ಗಿಕ ವಿಪತ್ತು ಸಂಭವಿಸಲು ಮೂಕ ಪ್ರಾಣಿಗಳ ಹತ್ಯೆ ಹಾಗೂ ಮಾಂಸ ಭಕ್ಷಣೆಯೇ ಮೂಲ ಕಾರಣವಾಗಿದೆ’ ಎಂದು ಐಐಟಿ–ಮಂಡಿ ನಿರ್ದೇಶಕ ಲಕ್ಷ್ಮಿಧರ್ ಬೆಹೆರಾ ನೀಡಿರುವ ಹೇಳಿಕೆಯು ವಿವಾದಕ್ಕೆ ಗ್ರಾಸವಾಗಿದೆ.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಬೆಹೆರಾ ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪ್ರಾಣಿಗಳು ಮತ್ತು ನಿಸರ್ಗದ ನಡುವೆ ಸಹಜೀವನ ಸಂಬಂಧವಿದೆ. ಆದರೆ, ಇದು ನಿಮ್ಮ ಕಣ್ಣಿಗೆ ಕಾಣುವುದಿಲ್ಲ. ಮೂಕಜೀವಿಗಳ ಹತ್ಯೆ ಮುಂದುವರಿದರೆ ನಿಸರ್ಗವೂ ಅವನತಿ ಕಾಣಲಿದೆ. ಜೊತೆಗೆ, ಹಿಮಾಚಲ ಪ್ರದೇಶವು ಅವನತಿ ಹೊಂದಲಿದೆ ಎಂದು ಹೇಳಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಹಿಮಾಚಲ ಪ್ರದೇಶವು ಪದೇ ಪದೇ ನೈಸರ್ಗಿಕ ವಿಕೋಪಕ್ಕೆ ತುತ್ತಾಗುತ್ತಿದೆ. ಪ್ರಾಣಿಗಳ ಮೇಲೆ ನಡೆಯುತ್ತಿರುವ ಕ್ರೌರ್ಯ ಹಾಗೂ ಮಾಂಸ ಭಕ್ಷಣೆಯೇ ಇದಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಈ ವಿಡಿಯೊ ಚಿತ್ರೀಕರಣ ಯಾವಾಗ ನಡೆದಿದೆ ಎಂಬುದು ತಿಳಿದುಬಂದಿಲ್ಲ ಅಲ್ಲದೇ, ಐಐಟಿ–ಮಂಡಿ ಕೂಡ ವಿವಾದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.