ನವದೆಹಲಿ: ದೇಶದಲ್ಲಿ ಪ್ರತಿದಿನ ಕೋವಿಡ್ 19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಜನರನ್ನು ಉಗುಳು ಪ್ರೇರೇಪಿಸುವ ಹೊಗೆರಹಿತ ತಂಬಾಕು ಉತ್ಪನ್ನಗಳ ಬಳಕೆಯನ್ನು ನಿರ್ಬಂಧಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಸೂಚಿಸಿದೆ.
ಹೊಗೆರಹಿತ ತಂಪಾಕು ಪದಾರ್ಥಗಳಾದ ಗುಟ್ಕಾ, ಜರ್ದಾ, ಖೈನಿ, ಪಾನ್ ಮಸಾಲ ಮತ್ತು ಅಡಕೆ ಜಗಿಯುವವರು ಆಗಾಗ್ಗೆ, ಅಲ್ಲಲ್ಲಿ ಉಗುಳುವುದರಿಂದ ಕೋವಿಡ್ ಸೋಂಕು ಶೀಘ್ರವಾಗಿ ವ್ಯಾಪಿಸುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
‘ದೇಶದಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕ ಪದಾರ್ಥಗಳನ್ನು ಸೇವಿಸಬಾರದು ಮತ್ತು ಉಗುಳಬಾರದು ಎಂದು ‘ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ’ ಜನರಲ್ಲಿ ಮನವಿ ಮಾಡಿದೆ,’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ರಾಜ್ಯಗಳಿಗೆ ಪತ್ರ ಬರೆದಿದೆ.
‘ನಿಯಮ ಉಲ್ಲಂಘಿಸುವವರ ವಿರುದ್ಧ ತಂಬಾಕು ವಿರೋಧಿ ಕಾನೂನು ಮಾತ್ರವಲ್ಲದೇ, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ–1897, ವಿಪತ್ತು ನಿರ್ವಹಣಾ ಕಾಯ್ದೆ–2005 ಮತ್ತು ಭಾರತೀಯ ದಂಡ ಸಂಹಿತೆ–1860 ರ ಅಡಿಯಲ್ಲೂ ಪ್ರಕರಣ ದಾಖಲಿಸಬಹುದು,’ ಎಂದು ಸಚಿವಾಲಯ ರಾಜ್ಯಗಳಿಗೆ ತಿಳಿಸಿದೆ.
ಭಾರತದ 21 ಕೋಟಿ ಮಂದಿ ಗುಟ್ಕಾ, ಪಾನ್ ಮಸಾಲಾವನ್ನು ಅಡಕೆ ಮತ್ತು ತಂಬಾಕಿನೊಂದಿಗೆ ಜಗಿಯುತ್ತಾರೆ ಎನ್ನುತ್ತದೆ ವಿಶ್ವ ವಯಸ್ಕರ ತಂಬಾಕು ಸಮೀಕ್ಷೆ.