ನವದೆಹಲಿ:ಜಗತ್ತನೇ ಬೆಚ್ಚಿಬೀಳಿಸಿ ಭಾರತವನ್ನೂ ನಲುಗಿಸುತ್ತಿರುವ ಮಾರಣಾಂತಿಕ ಕೋವಿಡ್-19 ಸೋಂಕಿನ ಬಗ್ಗೆ ತಮ್ಮ ಜನಪ್ರಿಯ ಕಾರ್ಯಕ್ರಮ 'ಮನ್ ಕಿ ಬಾತ್'ನಲ್ಲಿ ಪ್ರಧಾನಿ ಮೋದಿ ಇಂದು ಬೆಳಗ್ಗೆ 11 ಗಂಟೆಗೆ ಮಾತನಾಡಲಿದ್ದಾರೆ.
ಈ ಬಗ್ಗೆ ಶನಿವಾರ ರಾತ್ರಿ ಟ್ವೀಟ್ ಮಾಡಿರುವ ಅವರು, ಇಂದು ನಡೆಯುವ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಕೋವಿಡ್-19 ನಿಂದ ದೇಶದಲ್ಲಿ ಉದ್ಬವಿಸಿರುವ ಪರಿಸ್ಥಿತಿಯ ಬಗ್ಗೆ ವಿಶೇಷ ಗಮನ ಹರಿಸುವುದಾಗಿ ತಿಳಿಸಿದ್ದಾರೆ.
'ನಾಳೆ 11 ಕ್ಕೆ ಟ್ಯೂನ್ ಮಾಡಿ. ಕೋವಿಡ್-19 ಸೋಂಕಿನಿಂದ ತಲೆದೋರಿರುವ ಪರಿಸ್ಥಿತಿಯ ಮೇಲೆ ನಾಳಿನ ಕಂತು ಕೇಂದ್ರೀಕೃತವಾಗಿರಲಿದೆ" ಎಂದು ಪ್ರಧಾನಿ ಮೋದಿ ಶನಿವಾರ ರಾತ್ರಿ ಟ್ವೀಟ್ ಮಾಡಿದ್ದಾರೆ.
ಶನಿವಾರ ಒಂದೇ ದಿನ ದೇಶದಲ್ಲಿ 179 ಕೊರೊನಾ ವೈರಾಣು ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಕೋವಿಡ್-19 ಸೋಂಕಿತರ ಒಟ್ಟು ಸಂಖ್ಯೆ 933ಕ್ಕೆ ಏರಿದೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 81ಕ್ಕೆ ಏರಿಕೆಯಾಗಿದ್ದು, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ, 180 ಪ್ರಕರಣಗಳು ವರದಿಯಾಗಿವೆ. ಕೇರಳದಲ್ಲಿ ಸೋಂಕಿತರ ಸಂಖ್ಯೆ 176ಕ್ಕೆ ಏರಿದೆ.