ಹೈದರಾಬಾದ್: ತೆಲಂಗಾಣದಲ್ಲಿ ಕೊರೊನಾ ಸೋಂಕಿನಿಂದಾಗಿ ಬುಧವಾರ ಮೂವರು ಸಾವಿಗೀಡಾಗಿದ್ದಾರೆ. ಇವರೆಲ್ಲರೂ ಕಳೆದ ತಿಂಗಳು ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದಿದ್ದ ತಬ್ಲೀಗ್ ಜಮಾತ್ನ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದರು.
ಕೋವಿಡ್–19 ದೃಢಪಟ್ಟ ಮೂವತ್ತು ಹೊಸ ಪ್ರಕರಣಗಳು ತೆಲಂಗಾಣದಲ್ಲಿ ವರದಿಯಾಗಿರುವುದಾಗಿ ಗುರುವಾರ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಕಚೇರಿಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸೋಂಕಿನಿಂದಾಗಿ ಈ ಹಿಂದೆ ರಾಜ್ಯದಲ್ಲಿ ಮೃತಪಟ್ಟಿರುವ ಆರು ಮಂದಿ ಸಹ ತಬ್ಲೀಗ್ ಜಮಾತ್ನ ಧಾರ್ಮಿಕ ಸಭೆಯಲ್ಲಿ ಭಾಗಿವಹಿಸಿದ್ದರು. ಬುಧವಾರ ಮೂವರು ಸಾವಿಗೀಡಾಗುವ ಮೂಲಕ ಒಟ್ಟು ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಸೋಂಕು ದೃಢಪಟ್ಟಿರುವ ಎಲ್ಲ 30 ಮಂದಿಯೂ ದೆಹಲಿಯ ನಿಜಾಮುದ್ದೀನ್ಗೆ ಭೇಟಿ ನೀಡಿದ ಹಿನ್ನೆಲೆ ಹೊಂದಿದ್ದಾರೆ.
01.04. 2020
— Eatala Rajender (@Eatala_Rajender) April 1, 2020
Today positive cases: 30.
Dealths :3
(2 in Gandhi, 1 in yashoda)
Toatal deaths till now :9.
ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿ ಪ್ರದೇಶಗಳು ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಕಳೆದ ತಿಂಗಳು ನಿಜಾಮುದ್ದೀನ್ನಲ್ಲಿ ನಡೆದ ಸಭೆಯಲ್ಲಿ ಸುಮಾರು 8,500 ಮಂದಿ ಭಾಗಿಯಾಗಿದ್ದು, ಅವರೆಲ್ಲರ ಗುರುತು ಪತ್ತೆ ಮಾಡಬೇಕಿದೆ.
ಹರಿಯಾಣದ ಅಂಬಾಲಾದಲ್ಲಿ 67 ವರ್ಷ ವಯಸ್ಸಿನ ವ್ಯಕ್ತಿ ಸಾವಿಗೀಡಾಗಿದ್ದಾರೆ. ಶ್ರೀಲಂಕಾ ಪ್ರವಾಸದಿಂದ ಬಂದಿದ್ದ ವಡೊದಾರದ 52 ವರ್ಷ ವಯಸ್ಸಿನ ವ್ಯಕ್ತಿ ಸಹ ಇಂದು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಕೋವಿಡ್–19 ದೃಢಪಟ್ಟಿರುವ ಮೂರು ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳು 338 ತಲುಪಿದೆ. ರಾಜಸ್ಥಾನದಲ್ಲಿ ಕೊರೊನಾ ಸೋಂಕಿಗೆ ಒಳಗಾಗಿರುವ ಒಂಬತ್ತು ಹೊಸ ಪ್ರಕರಣಗಳು ವರದಿಯಾಗಿವೆ. ರಾಜಸ್ಥಾನದಲ್ಲಿ ಒಟ್ಟು ಪ್ರಕರಣಗಳು 129 ಆಗಿದೆ. ಕರ್ನಾಟಕದಲ್ಲಿ ಈವರೆಗೂ 110 ಪ್ರಕರಣಗಳು ವರದಿಯಾಗಿವೆ. 3 ಮಂದಿ ಸೋಂಕಿನಿಂದ ಸಾವಿಗೀಡಾಗಿದ್ದಾರೆ.
ಲಾಕ್ಡೌನ್ ಆಗಿ ಒಂಬತ್ತನೇ ದಿನಕ್ಕೆ ಭಾರತದಲ್ಲಿ ಕೊರೊನಾ ವೈರಸ್ ಸೊಂಕು ಪ್ರಕರಣಗಳು 1,900 ದಾಟಿದ್ದು 67 ಮಂದಿ ಸಾವಿಗೀಡಾಗಿದ್ದಾರೆ. ಅಸ್ಸಾಂ ಮತ್ತು ಮಣಿಪುರದಲ್ಲಿ ಬುಧವಾರ ನಾಲ್ಕು ಹೊಸ ಪ್ರಕರಣಗಳು ವರದಿಯಾಗಿದ್ದು, ಅವರೂ ಸಹ ನಿಜಾಮುದ್ದೀನ್ ಪ್ರದೇಶಕ್ಕೆ ಭೇಟಿ ನೀಡಿದ್ದರೆಂದು ತಿಳಿದು ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.