ನವದೆಹಲಿ: ಗುಜರಾತ್ನಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ವಿವಿಧ ಕಾರಣಗಳಿಂದಾಗಿ 21 ಸಿಂಹಗಳು ಮೃತಪಟ್ಟಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಅಪಾಯ ಸ್ಥಿತಿ ಎದುರಿಸುತ್ತಿರುವಸಿಂಹಗಳನ್ನು ರಕ್ಷಿಸುವಂತೆ ನಿರ್ದೇಶನ ನೀಡಿದೆ.
ಮದನ್ ಬಿ.ಲೋಕೂರ್ ಅವರಿದ್ದ ಪೀಠ, ‘ಸಿಂಹಗಳನ್ನು ರಕ್ಷಿಸಲೇಬೇಕು. ನೀವು(ಸರ್ಕಾರ) ಸಾವಿಗೆ ಕಾರಣವೇನು ಎಂಬುದನ್ನು ಪತ್ತೆಮಾಡಿ,ನಿಯಂತ್ರಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ಬುಧವಾರ ಸೂಚಿಸಿದೆ.
ರಾಷ್ಟ್ರದಾದ್ಯಂತ ಅರಣ್ಯ ರಕ್ಷಣೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಮೇಲ್ಮನವಿಯೊಂದರ ವಿಚಾರಣೆ ನಡೆಸಿದ ಪೀಠ, ಗಿರ್ ಅರಣ್ಯದಲ್ಲಿನ ಸಿಂಹಗಳ ಸಾವು ಪ್ರಕರಣವನ್ನು ಉಲ್ಲೇಖಿಸಿತು. ಇದು ಅತ್ಯಂತ ಅಪಾಯಕಾರಿಯಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ದಾಖಲಿಸುವಂತೆಯೂ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ಎಎನ್ಎಸ್ ನಾಡಕರ್ಣಿ ಅವರು ಕೋರ್ಟ್ನಿಂದ ಸಮಯಾವಕಾಶ ಕೋರಿದ್ದಾರೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಗುಜರಾತ್ ಸರ್ಕಾರವೂ ಭರವಸೆ ನೀಡಿದ್ದು, ಒಂದು ವಾರದ ಗಡುವು ನೀಡಲಾಗಿದೆ.