ನವದೆಹಲಿ: 'ಯಾವುದೇ ಒತ್ತಡಕ್ಕೆ ಒಳಗಾಗಿ ರಾಜೀನಾಮೆ ನೀಡಿಲ್ಲ. ನನಗೆ ಅನ್ಯಾಯ ಸಹಿಸಲಾಗುತ್ತಿರಲಿಲ್ಲ. ಹೀಗಾಗಿ, ರಾಜೀನಾಮೆ ನೀಡಿರುವೆ' ಎಂದು ದೆಹಲಿ ಸರ್ಕಾರದ ಸಚಿವ ರಾಜಕುಮಾರ್ ಆನಂದ್ ಅವರು ಗುರುವಾರ ತಿಳಿಸಿದ್ದಾರೆ.
ಆನಂದ್ ಬಿಜೆಪಿ ಸೇರಬಹುದು ಎಂಬ ಎಎಪಿ ನಾಯಕರ ಆರೋಪಗಳಿಗೆ ಪ್ರತಿಕ್ರಿಯಿಸಿದ ಆನಂದ್ ಅವರು, ‘ರಾಜಕೀಯ ಎನ್ನುವುದು ಸಾಧ್ಯತೆಗಳ ಆಟ, ಮುಂದೇನಾಗಬಹುದು ಎಂದು ಯಾರಿಗೂ ಗೊತ್ತಾಗಲ್ಲ’ ಎಂದರು.
ಇ.ಡಿಯಿಂದ ನೋಟಿಸ್ ಬಂದ ಕಾರಣಕ್ಕೆ ಆನಂದ್ ಅವರು ರಾಜೀನಾಮೆ ನೀಡಿದ್ದಾರೆ ಎಂಬ ಆಪ್ ನಾಯಕರ ಆರೋಪಕ್ಕೆ ಉತ್ತರಿಸಿದ ಅವರು, ‘ನನಗೆ ಇ.ಡಿಯಿಂದ ಯಾವುದೇ ನೋಟಿಸ್ ಬಂದಿಲ್ಲ’ ಎಂದರು.
‘ತಾಂತ್ರಿಕವಾಗಿ ಆನಂದ್ ಅವರು ಇನ್ನೂ ಸಚಿವರಾಗಿಯೇ ಇದ್ದಾರೆ. ಆನಂದ್ ಅವರು ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಕಚೇರಿಗೆ ತಲುಪಿಸಿದ್ದಾರೆ. ಆದರೆ ಮುಖ್ಯಮಂತ್ರಿಯವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ರಾಜೀನಾಮೆ ಪತ್ರವು ಮುಖ್ಯಮಂತ್ರಿಯವರನ್ನು ತಲುಪುವ ಸಾಧ್ಯತೆಗಳಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಸಚಿವರ ರಾಜೀನಾಮೆ ಪತ್ರಕ್ಕೆ ಮುಖ್ಯಮಂತ್ರಿಗಳ ಸಹಿ ಬಿದ್ದ ಬಳಿಕ ಲೆಫ್ಟಿನೆಂಟ್ ಗವರ್ನರ್ ಅವರ ಅಂಗೀಕಾರಕ್ಕೆ ಕಳುಹಿಸಲಾಗುತ್ತದೆ. ಆದ್ದರಿಂದ ಆನಂದ್ ಅವರ ರಾಜೀನಾಮೆ ಪತ್ರ ಅಂಗೀಕಾರಗೊಂಡಿಲ್ಲ’ ಎಂದು ಮೂಲಗಳು ತಿಳಿಸಿವೆ.
‘ಆನಂದ್ ಅವರ ರಾಜೀನಾಮೆ ಪತ್ರ ಸ್ವೀಕಾರವಾಗಿಲ್ಲ’ ಎಂದು ದೆಹಲಿ ವಿಧಾನಸಭೆ ಸ್ಪೀಕರ್ ಅವರ ಕಚೇರಿ ತಿಳಿಸಿದೆ.