ಪಿಟಿಐ
ನವದೆಹಲಿ: ದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಭಾರತ ಸರ್ಕಾರದ ವಿರುದ್ಧ ಕ್ರಿಮಿನಲ್ ಸಂಚು ರೂಪಿಸಿದ್ದ 2012ರ ಪ್ರಕರಣದಲ್ಲಿ ಇಂಡಿಯನ್ ಮುಜಾಹಿದ್ದೀನ್ (ಐಎಂ) ಉಗ್ರ ಸಂಘಟನೆಯ ನಾಲ್ವರು ಉಗ್ರರನ್ನು ಅಪರಾಧಿಗಳು ಎಂದು ದೆಹಲಿ ನ್ಯಾಯಾಲಯವು ಸೋಮವಾರ ತೀರ್ಪು ನೀಡಿದೆ.
ವಿಶೇಷ ನ್ಯಾಯಮೂರ್ತಿ ಶೈಲೇಂದ್ರ ಮಲಿಕ್ ಅವರು ಆರೋಪಿಗಳಾದ ದಾನಿಷ್ ಅನ್ಸಾರಿ, ಅಫ್ತಾಬ್ ಅಲಂ, ಇಮ್ರಾನ್ ಖಾನ್ ಮತ್ತು ಒಬೇದ್–ಉರ್– ರೆಹಮಾನ್ ಅವರಿಗೆ ಐಪಿಸಿಯ ವಿವಿಧ ಸೆಕ್ಷನ್ಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿ ಅಪರಾಧಿಗಳು ಎಂದು ಘೋಷಿಸಿದ್ದಾರೆ.
ಜುಲೈ 7ರಂದು ಆರೋಪಿಗಳು ತಪ್ಪೊಪ್ಪಿಕೊಂಡಿರುವುದನ್ನು ನ್ಯಾಯಾಲಯವು ಗಮನಿಸಿ ಈ ತೀರ್ಪು ಪ್ರಕಟಿಸಿದೆ.
ರಾಷ್ಟ್ರೀಯ ತನಿಖಾ ದಳವು 2012ರಲ್ಲಿ ಐಪಿಸಿ ಸೆಕ್ಷನ್ 121ಎ ಮತ್ತು 123 ಅಡಿ ಈ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿತ್ತು.
ನಾಲ್ವರ ವಿರುದ್ಧ ಯುಎಪಿಎ ಅಡಿ ಸೆಕ್ಷನ್ಗಳಾದ 17 (ಭಯೋತ್ಪಾದನಾ ಚಟುವಟಿಕೆಗೆ ಹಣ ಸಂಗ್ರಹ), 18 (ಭಯೋತ್ಪಾದನಾ ಚಟುವಟಿಕೆಗೆ ಸಂಚು ರೂಪಿಸುವುದು), 18 ಎ (ಭಯೋತ್ಪಾದಕರಿಗೆ ಶಿಬಿರ ನಡೆಸುವುದು), 18 ಬಿ (ಭಯೋತ್ಪಾದನಾ ಚಟುವಟಿಕೆಗಾಗಿ ವ್ಯಕ್ತಿಯನ್ನು ನಿಯೋಜಿಸುವುದು) ಮತ್ತು 20 (ಉಗ್ರ ಸಂಘಟನೆಯ ಸದಸ್ಯರಾಗಿರುವುದು) ಪ್ರಕರಣ ದಾಖಲಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.