ನವದೆಹಲಿ: ದೆಹಲಿ ಮೆಟ್ರೊದಲ್ಲಿ ಬಾಗಿಲಿಗೆ ಸೀರೆ ಸಿಲುಕಿದ್ದರಿಂದ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮೆಟ್ರೊ ರೈಲ್ ಕಾರ್ಪೊರೇಷನ್ (ಡಿಎಂಆರ್ಸಿ)ಗೆ ವಿವರವಾದ ವರದಿ ಸಲ್ಲಿಸುವಂತೆ ದೆಹಲಿ ಸರ್ಕಾರ ಸೂಚಿಸಿದೆ. ಜತೆಗೆ ಮೃತ ಮಹಿಳೆಯ ಮಕ್ಕಳ ಭವಿಷ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದೆ.
ಸಾರಿಗೆ ಸಚಿವ ಕೈಲಾಶ್ ಗೆಹಲೋತ್ ಅವರು ಸೋಮವಾರ ಈ ವಿಷಯ ತಿಳಿಸಿದ್ದು, ‘ಇಂದ್ರಲೋಕ ಮೆಟ್ರೊ ನಿಲ್ದಾಣದ ಬಳಿ ರೀನಾ (35) ಎಂಬುವವರು ಗುರುವಾರ ಪ್ರಯಾಣಿಸುವ ಸಂದರ್ಭದಲ್ಲಿ ಬಾಗಿಲಿಗೆ ಸೀರೆ ಸಿಲುಕಿದ್ದರಿಂದ ಆಯತಪ್ಪಿ ಅವರು ಪ್ಲಾಟ್ಫಾರ್ಮ್ ಮೇಲೆ ಬಿದ್ದಿದ್ದರು. ಕೆಲ ದೂರ ಮಹಿಳೆಯನ್ನು ರೈಲು ಎಳೆದೊಯ್ದಿದೆ. ತಕ್ಷಣ ರೈಲನ್ನು ನಿಲ್ಲಿಸಲಾಗಿದೆ. ಆದರೆ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಶನಿವಾರ ಅವರು ಮೃತಪಟ್ಟಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
‘ಘಟನೆ ಕುರಿತು ವರದಿ ಸಲ್ಲಿಸುವಂತೆ ಡಿಎಂಆರ್ಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಜತೆಗೆ ಅವರಿಗೆ ನೀಡಬಹುದಾದ ಪರಿಹಾರ ಕುರಿತೂ ಮಾಹಿತಿ ನೀಡುವಂತೆ ಹೇಳಲಾಗಿದೆ. ಮೃತ ಕುಟುಂಬಕ್ಕೆ ಡಿಎಂಆರ್ಸಿ ಸೂಕ್ತ ಪರಿಹಾರ ನೀಡಬೇಕು’ ಎಂದಿದ್ದಾರೆ.
‘ರೀನಾ ಅವರ ಪತಿ ಏಳು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಅವರಿಗೆ 10 ವರ್ಷದ ಪುತ್ರ ಹಾಗ 12 ವರ್ಷದ ಪುತ್ರಿ ಇದ್ದಾರೆ. ಅವರ ಸಂಬಂಧಿಕರು ಆರ್ಥಿಕ ಪರಿಸ್ಥಿತಿಯಿಂದ ಮಕ್ಕಳನ್ನು ನೋಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಆ ಮಕ್ಕಳ ಭವಿಷ್ಯಕ್ಕಾಗಿ ಡಿಎಂಆರ್ಸಿ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಗೆಹಲೋತ್ ಹೇಳಿದ್ದಾರೆ.