ನವದೆಹಲಿ: ಕೇರಳ ಕರಾವಳಿಯಲ್ಲಿ ಇಬ್ಬರು ಭಾರತೀಯ ಮೀನುಗಾರರ ಹತ್ಯೆಗೆ ಸಂಬಂಧಿಸಿ ಇಟಲಿ ನೀಡಿರುವ ಪರಿಹಾರ ಧನ ಮೊತ್ತವನ್ನು ನ್ಯಾಯಾಲಯದ ಖಾತೆಗೆ ಜಮೆ ಮಾಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಶುಕ್ರವಾರ ನಿರ್ದೇಶನ ನೀಡಿತು.
ಈ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ ಬೊಬಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಹಾಗೂ ವಿ.ರಾಮಸುಬ್ರಮಣಿಯನ್ ಅವರಿರುವ ಪೀಠ, ‘ಹತ್ಯೆಯಾದ ಮೀನುಗಾರರ ಕುಟುಂಬ ಸದಸ್ಯರಿಗೆ ನ್ಯಾಯಾಲಯವೇ ಪರಿಹಾರ ಧನ ವಿತರಿಸಲಿದೆ’ ಎಂದು ಹೇಳಿತು.
‘ಇಟಲಿ ನೌಕಾಪಡೆ ಸಿಬ್ಬಂದಿ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸುವಂತೆ ಕೇಂದ್ರ ಸರ್ಕಾರ ಮನವಿ ಮಾಡಿದೆ. ಪರಿಹಾರದ ಮೊತ್ತವನ್ನು ತನ್ನ ಖಾತೆಗೆ ಜಮೆ ಮಾಡಿದ ಒಂದು ವಾರದ ಬಳಿಕ ಕೇಂದ್ರದ ಮನವಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗುವುದು’ ಎಂದೂ ಪೀಠ ಹೇಳಿತು.
2012ರ ಫೆಬ್ರುವರಿಯಲ್ಲಿ ಭಾರತದ ಇಬ್ಬರು ಮೀನುಗಾರರನ್ನು ಹತ್ಯೆ ಮಾಡಲಾಗಿತ್ತು. ಇಟಲಿ ನೌಕಾಪಡೆಯ ಇಬ್ಬರು ಸಿಬ್ಬಂದಿ ಈ ಹತ್ಯೆ ಮಾಡಿದ್ದಾರೆ ಎಂದು ಭಾರತ ಆರೋಪಿಸಿತ್ತು.