ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್‌ ನಿರ್ಬಂಧ ಹೇರುವುದೇಕೆಂದು ಉದಾಹರಣೆ ಸಮೇತ ವಿವರಿಸಿದ ಶಶಿ ತರೂರ್‌

ಅಕ್ಷರ ಗಾತ್ರ

ಬೆಂಗಳೂರು: ಅಮೆರಿಕದ ಡಿಜಿಟಲ್‌ ಮಿಲೇನಿಯಮ್‌ ಕಾಪಿರೈಟ್‌ ಆ್ಯಕ್ಟ್‌(ಡಿಎಂಸಿಎ) ತುಂಬ ಹೈಪರ್‌ ಆ್ಯಕ್ಟಿವ್‌ ಆಗಿದೆ. ಕಾಪಿರೈಟ್‌ ಹೊಂದಿರುವ ಸಂಗೀತ ಬಳಕೆಯಾದರೂ ಟ್ವಿಟರ್‌ ನಿರ್ಬಂಧ ಹೇರುತ್ತದೆ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಹೇಳಿದ್ದಾರೆ.

ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್‌ ಪ್ರಸಾದ್‌ ಅವರ ಟ್ವಿಟರ್‌ ಖಾತೆ ಒಂದು ಗಂಟೆ ಸ್ಥಗಿತಗೊಳಿಸಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಶಶಿ ತರೂರ್‌, 'ರವಿ ಜೀ ನನಗೂ ಇಂತಹ ಅನುಭವ ಆಗಿದೆ. ಡಿಎಂಸಿಎ ಅತಿ ಚುರುಕಾಗಿ ಕಾರ್ಯನಿರ್ವಹಿಸುತ್ತದೆ' ಎಂದಿದ್ದಾರೆ.

ಉದಾಹರಣೆಯಾಗಿ ನಿರ್ಬಂಧಗೊಂಡ ತಾವು ಅಪ್‌ಲೋಡ್‌ ಮಾಡಿದ್ದ ಕೆಲವು ಟ್ವಿಟರ್‌ ಪೋಸ್ಟ್‌ಗಳನ್ನು ಶಶಿ ತರೂರ್‌ ಉಲ್ಲೇಖಿಸಿದ್ದಾರೆ.

ಕೇರಳದ ಸಾಂಪ್ರದಾಯಿಕ ಉಡುಗೆ ತೊಟ್ಟ ಯುವತಿಯೊಬ್ಬಳು ಅಮೆರಿಕದ ಹಾಡೊಂದಕ್ಕೆ ನರ್ತಿಸುತ್ತಿರುವ ವಿಡಿಯೊ ಪೋಸ್ಟ್‌ ಮಾಡಿರುವ ತರೂರ್‌, 'ಈ ವಿಡಿಯೊ ಮೇಲೆ ಟ್ವಿಟರ್‌ ನಿರ್ಬಂಧ ಹೇರುತ್ತದೆ. ಕಾರಣ ಇದರಲ್ಲಿ ಬಳಕೆಯಾಗಿರುವುದು ಬೋನಿ ಎಂ ಎಂಬ ಹಾಡುಗಾರರ ತಂಡದ ರಾಸ್‌ಪುಟಿನ್‌ ಎಂಬ ಹಾಡಾಗಿದೆ. ಕಾಪಿರೈಟ್‌ ಇರುವ ಕಾರಣ ಈ ವಿಡಿಯೊವನ್ನು ಟ್ವಿಟರ್‌ ಡಿಲೀಟ್‌ ಮಾಡುತ್ತದೆ' ಎಂದು ವಿವರಿಸಿದ್ದಾರೆ. ಪೋಸ್ಟ್‌ ಮಾಡಿದ ಸ್ವಲ್ಪ ಸಮಯದಲ್ಲೇ ವಿಡಿಯೊವನ್ನು ಟ್ವಿಟರ್‌ ತೆಗೆದು ಹಾಕಿದೆ.

'ಟ್ವಿಟರ್‌ನ ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಲಾಕ್‌ ಮಾಡಲಾದ ಖಾತೆಯನ್ನು ಪುನಃ ಸಕ್ರಿಯಗೊಳ್ಳುವಂತೆ ಮಾಡುತ್ತದೆ' ಎಂದು ಶಶಿ ತರೂರ್‌ ಹೇಳಿದ್ದಾರೆ.

ಟಿವಿ ಚಾನೆಲ್‌ ಒಂದರ ಸಂದರ್ಶನದಲ್ಲಿ ಟ್ವಿಟರ್‌ನ ಕಾರ್ಯವೈಖರಿಯನ್ನು ಪ್ರಬಲವಾಗಿ ಟೀಕಿಸಿದ್ದೆ. ತಮ್ಮ ಹೇಳಿಕೆಯಲ್ಲಿ ಪರಿಣಾಮಕಾರಿ ಸಂದೇಶವಿತ್ತು. ಆದ್ದರಿಂದ ಟ್ವಿಟರ್‌ ಅದರ ಮೇಲೆ ನಿರ್ಬಂಧ ಹೇರಿದೆ. ತಮ್ಮ ಖಾತೆಯನ್ನು ಒಂದು ಗಂಟೆ ಸ್ಥಗಿತಗೊಳಿಸುವ ಮೂಲಕ ವಾಕ್‌ ಸ್ವಾತಂತ್ರ್ಯಕ್ಕೆ ಟ್ವಿಟರ್‌ ಧಕ್ಕೆ ತಂದಿದೆ. ತನ್ನ ಅಜೆಂಡಾಗೆ ವಿರುದ್ಧ ವಿರುವ ಪೋಸ್ಟ್‌ಗಳನ್ನು ಟ್ವಿಟರ್‌ ಡಿಲೀಟ್‌ ಮಾಡುತ್ತಿದೆ ಎಂದು ಸಚಿವ ರವಿ ಶಂಕರ್‌ ಪ್ರಸಾದ್‌ ಸರಣಿ ಟ್ವೀಟ್‌ನಲ್ಲಿ ಆಪಾದಿಸಿದ್ದಾರೆ.

ಅಮೆರಿಕದ ಡಿಜಿಟಲ್‌ ಮಿಲೇನಿಯಂ ಹಕ್ಕುಸ್ವಾಮ್ಯ ಕಾಯ್ದೆಯ (ಡಿಎಂಸಿಎ) ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಟ್ವಿಟರ್‌ ಸಂಸ್ಥೆಯು ಕೇಂದ್ರದ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್‌ ಅವರ ಟ್ವಿಟರ್‌ ಖಾತೆಯನ್ನೇ ಶುಕ್ರವಾರ ಒಂದು ಗಂಟೆ ಕಾಲ ತಡೆಹಿಡಿದಿತ್ತು.

ಟ್ವಿಟರ್‌ನ ಈ ಕ್ರಮಕ್ಕೆ ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಸಂಸ್ಥೆಗೆ ಎಚ್ಚರಿಕೆ ನೀಡಿದ ನಂತರ ಅವರ ಖಾತೆಯನ್ನು ಪುನಃ ಬಳಕೆಗೆ ಮುಕ್ತಗೊಳಿಸಲಾಗಿದೆ. ಆದರೆ, ಪ್ರಸಾದ್‌ ಅವರ ಯಾವ ಪೋಸ್ಟ್‌ ಡಿಎಂಸಿಎ ಕಾಯ್ದೆಯನ್ನು ಉಲ್ಲಂಘಿಸಿದೆ ಎಂಬ ಬಗ್ಗೆ ಟ್ವಿಟರ್‌ ಇನ್ನೂ ಮಾಹಿತಿ ನೀಡಲಿಲ್ಲ.

ಕೇಂದ್ರ ರೂಪಿಸಿರುವ ಹೊಸ ಐಟಿ ನಿಯಮಗಳಿಗೆ ಸಂಬಂಧಿಸಿದಂತೆ ಟ್ವಿಟರ್‌ ಹಾಗೂ ಕೇಂದ್ರ ಸರ್ಕಾರದ ಮಧ್ಯೆ ಸಂಘರ್ಷ ನಡೆಯುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿರುವುದರಿಂದ ಇದಕ್ಕೆ ಹೆಚ್ಚಿನ ಮಹತ್ವ ದೊರೆತಿದೆ.

ಟ್ವಿಟರ್‌ ಸಂಸ್ಥೆಯು ತನ್ನ ಖಾತೆಯನ್ನು ತಡೆಹಿಡಿದ ಕೂಡಲೇ ಇನ್ನೊಂದು ಸಾಮಾಜಿಕ ತಾಣ ‘ಕೂ’ ಮೊರೆಹೋದ ಸಚಿವರು, ಅಲ್ಲಿ ಟ್ವಿಟರ್‌ ವಿರುದ್ಧ ಸರಣಿ ಹೇಳಿಕೆಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.

‘ಸ್ನೇಹಿತರೇ, ಇಂದು ವಿಚಿತ್ರವಾದ ಘಟನೆಯೊಂದು ನಡೆದಿದೆ. ಡಿಎಂಸಿಎ ಕಾಯ್ದೆ ಉಲ್ಲಂಘನೆಯ ಆರೋಪದ ಮೇಲೆ ಟ್ವಿಟರ್‌ ಸಂಸ್ಥೆಯು ಒಂದು ಗಂಟೆ ಕಾಲ ನನ್ನ ಖಾತೆಗೆ ನನಗೆ ಪ್ರವೇಶ ನಿರಾಕರಿಸಿದೆ. ಆನಂತರ ತಾನಾಗಿಯೇ ಅದನ್ನು ಬಳಕೆಗೆ ಮುಕ್ತಗೊಳಿಸಿದೆ. ಯಾವುದೇ ಮುನ್ಸೂಚನೆ ನೀಡದೆ ನನ್ನ ಖಾತೆಯನ್ನು ತಡೆಹಿಡಿಯುವ ಮೂಲಕ ಸಂಸ್ಥೆಯು ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಉಲ್ಲಂಘಿಸಿದೆ’ ಎಂದಿದ್ದಾರೆ.

‘ತಾನು ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದಕ ಎಂದು ಟ್ವಿಟರ್‌ ಸಂಸ್ಥೆ ಹೇಳುತ್ತಿದೆ. ಆದರೆ ವಾಸ್ತವದಲ್ಲಿ ಆ ಸಂಸ್ಥೆ ಹಾಗಿಲ್ಲ, ತನ್ನ ಕಾರ್ಯಸೂಚಿಯನ್ನು ಮಾತ್ರ ಅದು ಜಾರಿ ಮಾಡಲು ಉತ್ಸುಕವಾಗಿದೆ ಎಂಬುದು ಈ ಕ್ರಮದಿಂದ ಸ್ಪಷ್ಟವಾಗುತ್ತದೆ. ತನ್ನ ನಿಯಮಗಳನ್ನು ಪಾಲಿಸದಿದ್ದರೆ ಸಂಸ್ಥೆಯು ಏಕಪಕ್ಷೀಯವಾಗಿ ತಮ್ಮನ್ನು ತೆಗೆದುಹಾಕಬಹುದೆಂಬ ಭೀತಿಯನ್ನು ಸಂಸ್ಥೆಯು ಬಳಕೆದಾರರಲ್ಲಿ ಮೂಡಿಸುತ್ತಿದೆ’ ಎಂದು ಪ್ರಸಾದ್‌ ಆರೋಪಿಸಿದ್ದಾರೆ.

‘ಸಾಮಾಜಿಕ ಜಾಲತಾಣಗಳ ಏಕಪಕ್ಷೀಯ ಕ್ರಮಗಳನ್ನು ಟೀಕಿಸಿ ಟಿ.ವಿ. ವಾಹಿನಿಗಳಿಗೆ ನೀಡಿರುವ ಸಂದರ್ಶನದ ತುಣುಕುಗಳನ್ನು ಈ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದರಿಂದ ಟ್ವಿಟರ್‌ ಸಂಸ್ಥೆಗೆ ತನ್ನ ರೆಕ್ಕೆಗಳನ್ನು ಕತ್ತರಿಸಿದ ಅನುಭವ ಆಗಿರುವಂತಿದೆ’ ಎಂದು ಅವರು ಟೀಕಿಸಿದ್ದಾರೆ. ಇದಾದ ಸ್ವಲ್ಪ ಹೊತ್ತಿನಲ್ಲೇ ಅವರ ಖಾತೆಯನ್ನು ಬಳಕೆಗೆ ಮುಕ್ತಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT