ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್ ಕೀ ಬಾತ್’ ನಡೆಸಿದ್ದು ಸಾಕು, ಈಗ ಸಂಸತ್ನಲ್ಲಿ ಅವರು ‘ಮಣಿಪುರ್ ಕೀ ಬಾತ್’ ನಡೆಸುವ ಸಮಯ’ ಎಂದು ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ಬುಧವಾರ ವಾಗ್ದಾಳಿ ಮಾಡಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುವ ಮುನ್ನಾ ದಿನ ಟ್ವೀಟ್ ಮಾಡಿರುವ ಒಬ್ರಿಯಾನ್, ಉಭಯ ಸದನಲ್ಲಿ ಪ್ರಧಾನಿ ಮಣಿಪುರ ಸಮಸ್ಯೆಯ ಬಗ್ಗೆ ಮಾತನಾಡಬೇಕು ಎಂದು ಒತ್ತಾಯಿಸಿದ್ದಾರೆ.
ಜನಾಂಗೀಯ ಕಲಹದಿಂದ ಹೊತ್ತಿ ಉರಿದ ಈಶಾನ್ಯ ರಾಜ್ಯದಲ್ಲಿನ ಪರಿಸ್ಥಿತಿಯ ಅವಲೋಕನಕ್ಕೆ ಐವರು ಸದಸ್ಯರ ಟಿಎಂಸಿ ನಿಯೋಗದೊಂದಿಗೆ ಇಂಫಾಲ್ಗೆ ಭೇಟಿ ನೀಡಿದ ದಿನವೇ ಒಬ್ರಿಯಾನ್ ಅವರು ಈ ಹೇಳಿಕೆ ನೀಡಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರೇ, ದಯವಿಟ್ಟು ಸಂಸತ್ಗೆ ಬನ್ನಿ. ಉಭಯ ಸದನಗಳಲ್ಲಿ ಮಾತನಾಡಿ. ನೀವು ಮನ್ ಕೀ ಬಾತ್ ನಡೆಸಿದ್ದು ಸಾಕು. ಮಣಿಪುರ್ ಕೀ ಬಾತ್ ನಡೆಸಬೇಕಾದ ಸಮಯವಿದು. ಒಂದು ವೇಳೆ ನೀವು ಮಣಿಪುರದ ವಿಷಯದ ಬಗ್ಗೆ ಮಾತನಾಡದೇ ದೂರವೇ ಉಳಿದರೆ ಮುಂಗಾರು ಅಧಿವೇಶನ ಸುಗಮವಾಗಿ ಸಾಗುವುದಿಲ್ಲ’ ಎಂದು ಒಬ್ರಿಯಾನ್ ಎಚ್ಚರಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ಮಣಿಪುರ ವಿಷಯದ ಬಗ್ಗೆ ವಿಸ್ತೃತ ಚರ್ಚೆ ನಡೆದಿದೆ. ಈ ವಿಚಾರವಾಗಿ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.
ಮೇ 3ರಿಂದ ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದಲ್ಲಿ 140ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.