ನವದೆಹಲಿ: ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಸ್ಥಾನದಿಂದ ಕೆಲ ತಿಂಗಳ ಹಿಂದಷ್ಟೇ ನಿವೃತ್ತರಾದ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿರುವುದು ಮತ್ತು ಅವರು ಆ ಸ್ಥಾನವನ್ನು ಒಪ್ಪಿರುವ ಕುರಿತು ದೇಶದಲ್ಲಿ ಪರ ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹೀಗಿರುವಾಗಲೇ ರಾಜ್ಯಸಭೆ ಸ್ಥಾನವನ್ನು ಒಪ್ಪಿಕೊಂಡಿರುವುದರ ಕುರಿತು ಗೊಗೊಯಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
‘ಬಹುಪಾಲು ನಾನು ನಾಳೆ ದೆಹಲಿಗೆ ತೆರಳುತ್ತಿದ್ದೇನೆ. ಮೊದಲು ನಾನು ಪ್ರಮಾಣವಚನ ಸ್ವೀಕರಿಸುತ್ತೇನೆ. ನಾನೇಕೆ ರಾಜ್ಯಸಭೆ ಸ್ಥಾನವನ್ನು ಒಪ್ಪಿದೆ, ಯಾತಕ್ಕಾಗಿ ರಾಜ್ಯಸಭೆಗೆ ಹೋಗುತ್ತಿದ್ದೇನೆ ಎಂಬುದನ್ನು ನಂತರ ಮಾಧ್ಯಮಗಳ ಎದುರು ಬಂದು ಮಾತನಾಡುತ್ತೇನೆ,’ ಎಂದು ಹೇಳಿದರು.
ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರನ್ನು ರಾಜ್ಯಸಭಾ ಸದಸ್ಯರಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಸೋಮವಾರ ನಾಮಕರಣ ಮಾಡಿದರು. ನಾಮಕರಣ ಸದಸ್ಯರಾಗಿದ್ದ ಹಿರಿಯ ವಕೀಲ ಕೆ.ಟಿ.ಎಸ್. ತುಳಸಿ ಅವರು ಫೆಬ್ರುವರಿಯಲ್ಲಿ ನಿವೃತ್ತರಾದ ಕಾರಣ ಈ ಸ್ಥಾನ ತೆರವಾಗಿತ್ತು. ಈ ಸ್ಥಾನಕ್ಕೆ ಗೊಗೊಯಿ ನಾಮನಿರ್ದೇಶನವಾಗಿದ್ದಾರೆ.
Former Chief Justice of India, Ranjan Gogoi: I'll go to Delhi probably tomorrow. Let me first take the oath then I will speak in detail to the media that why I accepted this and why I am going to Rajya Sabha. (file pic)
— ANI (@ANI) March 17, 2020
He has been nominated to Rajya Sabha by President Kovind. pic.twitter.com/aqRxtDtykl
ನ್ಯಾಯಮೂರ್ತಿಗಳಿಂದಲೇ ಟೀಕೆ
ರಂಜನ್ ಗೊಗೊಯಿ ಅವರು ರಾಜ್ಯಸಭೆ ಸ್ಥಾನ ಒಪ್ಪಿದ ಬಗ್ಗೆ ನ್ಯಾಯಮೂರ್ತಿಗಳಿಂದಲೇ ವಿರೋಧ ವ್ಯಕ್ತವಾಗಿದೆ.
‘2018ರ ಜನವರಿ 12ರಂದು ಪ್ರತಿಕಾಗೋಷ್ಠಿ ನಡೆಸಿ ದೇಶದ ನ್ಯಾಯಾಂಗ ವ್ಯವಸ್ಥೆಯೊಳಗಿನ ಹುಳುಕನ್ನು ಬಹಿರಂಗಪಡಿಸಿದ್ದ ನ್ಯಾಯಮೂರ್ತಿಗಳಲ್ಲಿ ರಂಜನ್ ಗೊಗೊಯಿ ಅವರೂ ಒಬ್ಬರು. ಆದರೆ ನನಗೆ ಈಗ ಆಶ್ಚರ್ಯವಾಗುತ್ತಿದೆ. ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದ ಗೊಗೊಯಿ ನ್ಯಾಯಾಂಗದ ಸ್ವಯತ್ತತೆ ಮತ್ತು ನಿಷ್ಪಕ್ಷಪಾತತೆಯ ವಿಚಾರದಲ್ಲಿನ ಪ್ರಧಾನ ತತ್ವಗಳೊಂದಿಗೆ ರಾಜಿ ಮಾಡಿಕೊಂಡಿದ್ದಾರೆ,’ ಎಂದು ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅಭಿಪ್ರಾಯಪಟ್ಟಿದ್ದಾರೆ.
‘ರಾಜ್ಯಸಭೆ ಸ್ಥಾನ ಒಪ್ಪಿದ ಗೊಗೊಯಿ ಅವರ ನಿರ್ಧಾರದಿಂದಾಗಿ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಸ್ವಾಯತ್ತತೆ, ನಿಷ್ಪಕ್ಷಪಾತತೆ ಮತ್ತು ಸಮಗ್ರತೆಯನ್ನು ಮತ್ತೊಮ್ಮೆ ವ್ಯಾಖ್ಯಾನಿಸಬೇಕಾದ ಸಂದರ್ಭ ಸೃಷ್ಟಿಯಾಗಿದೆ,’ ಎಂದು ನ್ಯಾ. ಮದನ್ ಬಿ. ಲೋಕೂರ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.