ನವದೆಹಲಿ: ಆಮದು ಕಲ್ಲಿದ್ದನ್ನು ಅವಲಂಬಿಸಿರುವ ದೇಶದ ಎಲ್ಲಾ ಉಷ್ಣ ವಿದ್ಯುತ್ ಸ್ಥಾವರಗಳು 2024ರ ಜೂನ್ ಅಂತ್ಯದವರೆಗೆ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ಇದೇ ತಿಂಗಳ ಅಂತ್ಯದವರೆಗಷ್ಟೇ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲು ಸರ್ಕಾರವು ಈ ಹಿಂದೆ ಸೂಚಿಸಿತ್ತು. ಆದರೆ, ದೇಶದಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ ಹಾಗೂ ಕಲ್ಲಿದ್ದಲು ದಾಸ್ತಾನು ಅಭಾವದಿಂದಾಗಿ ಕಾಲಾವಧಿ ವಿಸ್ತರಿಸಿ ಅಧಿಸೂಚನೆ ಹೊರಡಿಸಿದೆ.
‘ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳ ಕಾರ್ಯ ನಿರ್ವಹಣೆಯ ಕಾಲಾವಧಿ ವಿಸ್ತರಣೆ ಸಂಬಂಧ ಕೇಂದ್ರ ವಿದ್ಯುತ್ ಪ್ರಾಧಿಕಾರದ (ಸಿಇಎ) ಜೊತೆಗೆ ಚರ್ಚಿಸಲಾಗಿದೆ. ವಿದ್ಯುತ್ ಕಾಯ್ದೆಯ ಸೆಕ್ಷನ್ 11ರ ಪದತ್ತ ಅಧಿಕಾರದಡಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಕೇಂದ್ರ ವಿದ್ಯುತ್ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ದಿನೇ ದಿನೇ ವಿದ್ಯುತ್ ಬೇಡಿಕೆ ಹೆಚ್ಚುತ್ತಿದೆ. ದೇಶೀಯವಾಗಿ ಕಲ್ಲಿದ್ದಲು ಕೊರತೆ ತಲೆದೋರಿದೆ. ಮತ್ತೊಂದೆಡೆ ಜಲ ವಿದ್ಯುತ್ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಬೇಕಿದೆ. ಹಾಗಾಗಿ, ಆಮದು ಕಲ್ಲಿದ್ದಲು ಅವಲಂಬಿತ ಸ್ಥಾವರಗಳಿಂದ ಲಭ್ಯವಿರುವ ವಿದ್ಯುತ್ ಪಡೆದು ಅಗತ್ಯ ಬೇಡಿಕೆಯನ್ನು ಸರಿದೂಗಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಮುಂದ್ರಾದಲ್ಲಿರುವ ಅದಾನಿ ಪವರ್, ಗುಜರಾತ್ನ ಎಸ್ಸಾರ್, ರತ್ನಗಿರಿಯ ಜೆಎಸ್ಡಬ್ಲ್ಯು ಹಾಗೂ ಟ್ರಾಂಬೆಯಲ್ಲಿರುವ ಟಾಟಾ ಕಂಪನಿ ಸೇರಿದಂತೆ ಹಲವು ಖಾಸಗಿ ಕಂಪನಿಗಳು ಆಮದು ಕಲ್ಲಿದ್ದಲು ಅವಲಂಬಿತ ಶಾಖೋತ್ಪನ್ನ ಸ್ಥಾವರಗಳ ಒಡೆತನ ಹೊಂದಿವೆ.