ಚಂಡೀಗಢ: ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಕ್ಷೀಣಿಸುವಿಕೆಗೆ ಪರೋಕ್ಷವಾಗಿ ಪಂಜಾಬ್ ಸರ್ಕಾರವೇ ಕಾರಣ ಎಂಬ ಹರಿಯಾಣ ಕೃಷಿ ಸಚಿವರ ಹೇಳಿಕೆ ಇದೀಗ ಎರಡು ರಾಜ್ಯಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ಹರಿಯಾಣ ಕೃಷಿ ಸಚಿವ ಜೈ ಪ್ರಕಾಶ್ ದಲಾಲ್, ‘ದೆಹಲಿ ವಾಯು ಮಾಲಿನ್ಯ ಹೆಚ್ಚಳಕ್ಕೆ ಹರಿಯಾಣ ಕಾರಣವಲ್ಲ. ಕೃಷಿ ತ್ಯಾಜ್ಯ ವಿಲೇವಾರಿಗೆ ಹರಿಯಾಣ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ. ಕೃಷಿ ತ್ಯಾಜ್ಯ ಸುಡುವಿಕೆ ಕುರಿತಂತೆ ಪಂಜಾಬ್ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ‘ ಎಂದು ಹೇಳಿದ ಅವರು, ಕೃಷಿ ತ್ಯಾಜ್ಯ ಸುಡುವಿಕೆಯ ಕುರಿತಂತೆ ಎರಡು ರಾಜ್ಯಗಳ ದತ್ತಾಂಶವನ್ನು ಹಂಚಿಕೊಂಡಿದ್ದರು.
‘ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಅವರಲ್ಲಿ ನೀರು ಬಿಡುವಂತೆ ನಾವು ಬೇಡಿಕೆ ಸಲ್ಲಿಸಿದ್ದೇವೆ ವಿನಃ ಒಣ ಹುಲ್ಲನ್ನು ಸುಟ್ಟ ಹೊಗೆಯನ್ನಲ್ಲ’ ಎಂದು ಪರೋಕ್ಷವಾಗಿ ಚುಚ್ಚಿದ್ದರು.
ದಲಾಲ್ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು ಪಂಜಾಬ್ನ ಎಎಪಿ ಪಕ್ಷ, ಸುಳ್ಳುಗಳನ್ನು ಹರಡಬೇಡಿ ಎಂದು ಹೇಳಿದೆ.
‘ದೇಶದ 52 ಅತ್ಯಂತ ಕಲುಷಿತ ಜಿಲ್ಲೆಗಳ ಪೈಕಿ 20 ಜಿಲ್ಲೆಗಳು ಹರಿಯಾಣವೊಂದರಲ್ಲಿಯೇ ಇದೆ. ಹೀಗಿದ್ದರೂ ಖಟ್ಟರ್ (ಸಿಎಂ ಮನೋಹರ್ ಲಾಲ್ ಖಟ್ಟರ್) ಸರ್ಕಾರ ಪಂಜಾಬ್ ಅನ್ನು ದೂರುತ್ತಿದೆ. ರಾಜಕೀಯ ಬಿಟ್ಟು ಖಟ್ಟರ್ ಸರ್ಕಾರಕ್ಕೆ ಏನು ಮಾಡಲು ಸಾಧ್ಯ ಹೇಳಿ?’ ಎಂದು ಪಂಜಾಬ್ ಎಎಪಿ ವಕ್ತಾರ ನೀಲ್ ಗರ್ಗ್ ಕಿಡಿಕಾರಿದ್ದಾರೆ.
ಪಂಜಾಬ್ ಮತ್ತು ಹರಿಯಾಣದಲ್ಲಿ ಕೃಷಿ ತ್ಯಾಜ್ಯ ಸುಡುವಿಕೆಯು ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಹೆಚ್ಚಳಕ್ಕೆ ಒಂದು ಪ್ರಮುಖ ಕಾರಣವಾಗಿದೆ. ರೈತರಿಂದ ಕೃಷಿ ತ್ಯಾಜ್ಯ ಖರೀದಿಸುವ ಮೂಲಕ ಇದಕ್ಕೊಂದು ಪರಿಹಾರ ಕಂಡುಕೊಳ್ಳಲು ಎರಡು ರಾಜ್ಯಗಳಿಗೆ ಸುಪ್ರೀಂಕೋರ್ಟ್ ಸೂಚಿಸಿತ್ತು.