ಚಂಡೀಗಢ: 'ದೆಹಲಿ ಚಲೋ' ಪ್ರತಿಭಟನಾನಿರತ ರೈತ ನಾಯಕರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿ ಕ್ರಮ ಕೈಗೊಳ್ಳಲು ಮುಂದಾಗಿದ್ದ ಹರಿಯಾಣ ಪೊಲೀಸರು, ತನ್ನ ನಿರ್ಧಾರದಿಂದ ಶುಕ್ರವಾರ ಹಿಂದೆ ಸರಿದಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ, ಪ್ರತಿಭಟನಾನಿರತ ರೈತ ಸಂಘಟನೆಗಳ ಮುಖಂಡರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ–1980ರ ಸೆಕ್ಷನ್ 2(3) ಅಡಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಅಂಬಾಲ ಪೊಲೀಸರು ಗುರುವಾರವಷ್ಟೇ ಪ್ರಕಟಿಸಿದ್ದರು.
ಐಜಿಪಿ (ಅಂಬಾಲ ವಲಯ) ಸಿಬಾಷ್ ಕಬಿರಾಜ್ ಅವರು, 'ರೈತ ನಾಯಕರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲು ಉದ್ದೇಶಿಸಿದ್ದ ನಿರ್ಧಾರವನ್ನು ಮರುಪರಿಶೀಲಿಸಲಾಗಿದೆ. ಇದೀಗ ಆ ರೀತಿಯ ಕ್ರಮ ಕೈಗೊಳ್ಳದಿರಲು ತೀರ್ಮಾನಿಸಲಾಗಿದೆ' ಎಂದು ತಿಳಿಸಿದ್ದಾರೆ.
ಪ್ರತಿಭಟನಾನಿರತ ರೈತರು ಮತ್ತು ರೈತರ ನಾಯಕರು ಶಾಂತಿ ಕಾಪಾಡಬೇಕು. ಆಡಳಿತಗಳಿಗೆ ಸಹಕರಿಸಬೇಕು ಎಂದೂ ಮನವಿ ಮಾಡಿದ್ದಾರೆ.
ಪಂಜಾಬ್ ಮತ್ತು ಹರಿಯಾಣ ಗಡಿಭಾಗವಾದ ಶಂಭು ಮತ್ತು ಖನೌರಿ ಭಾಗಗಳಲ್ಲಿ ಪ್ರತಿಭಟನಾನಿರತ ರೈತರು ಬುಧವಾರ ಬ್ಯಾರಿಕೇಡ್ಗಳತ್ತ ಮುನ್ನುಗ್ಗಲು ಯತ್ನಿಸಿದಾಗ, ಅವರನ್ನು ಚದುರಿಸಲು ಹರಿಯಾಣ ಪೊಲೀಸರು ಅಶ್ರುವಾಯು ಶೆಲ್ಗಳನ್ನು ಸಿಡಿಸಿದ್ದರು. ಈ ವೇಳೆ ನಡೆದ ಘರ್ಷಣೆಯಲ್ಲಿ ಪಂಜಾಬ್ನ 21 ವರ್ಷದ ಯುವ ರೈತ ಮೃತಪಟ್ಟು, 12 ಪೊಲೀಸರು ಗಾಯಗೊಂಡಿದ್ದರು.
ರೈತನ ಸಾವಿನ ಬೆನ್ನಲ್ಲೇ, ಎರಡು ದಿನಗಳ ವರೆಗೆ ಪ್ರತಿಭಟನೆಗೆ ವಿರಾಮ ನೀಡುವುದಾಗಿ ಸಂಘಟನೆಗಳು ಘೋಷಿಸಿವೆ.