ನವದೆಹಲಿ: 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಟೆಲಿಕಾಂ ಸಚಿವ ಎ. ರಾಜಾ ಮತ್ತು ಇತರೆ 16 ಮಂದಿಯ ಖುಲಾಸೆ ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಅಂಗೀಕರಿಸಿದೆ.
ವಿಚಾರಣಾ ನ್ಯಾಯಾಲಯದ ತೀರ್ಪಿನಲ್ಲಿ ಕೆಲವು ವೈರುಧ್ಯಗಳಿದ್ದು, ಗಾಢ ಪರಿಶೀಲನೆಯ ಅಗತ್ಯವಿದೆ ಎಂದು ಸಿಬಿಐ ಅರ್ಜಿಗೆ ಪ್ರತಿಕ್ರಿಯೆಯಾಗಿ ದೆಹಲಿ ಹೈಕೋರ್ಟ್ ಹೇಳಿದೆ. ಸಿಬಿಐ ವಾದಕ್ಕೆ ಅರ್ಹ ಅಂಶಗಳನ್ನು ಎತ್ತಿಹಿಡಿದಿದೆ ಎಂದು ಕೋರ್ಟ್ ಹೇಳಿದೆ.
'ನ್ಯಾಯಾಲಯವು ಲಭ್ಯವಿರುವ ದಾಖಲೆಗಳು, ಸಾಕ್ಷಿಗಳ ಹೇಳಿಕೆ, ಎರಡೂ ಪಕ್ಷಗಳ ಸಲ್ಲಿಕೆಗಳ ಆಧಾರದ ಮೇಲೆ ವಿಚಾರಣಾ ನ್ಯಾಯಾಲಯ ತೀರ್ಪು ನೀಡಿದೆ. ಇವುಗಳ ಬಗ್ಗೆ ಗಾಢ ಪರಿಶೀಲನೆ ಮತ್ತು ಸಾಕ್ಷ್ಯಗಳ ಪುನರ್ ವಿಮರ್ಶೆಯ ಅಗತ್ಯವಿದೆ ಎಂದು ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಹೇಳಿದ್ದಾರೆ.
‘ತೀರ್ಪಿನ ವೈರುಧ್ಯಗಳನ್ನು ಆಪಾದಿತರ ಪರ ವಾದ ಮಂಡನೆ ವೇಳೆ ಸೃಷ್ಟಿಸಿದಂತೆ ತೋರುತ್ತಿದೆ. ಇವುಗಳ ನೇರ ಪರಿಶೀಲನೆ ಅಗತ್ಯವಿದೆ’ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಆರೋಪಿಗಳ ಖುಲಾಸೆ ಪ್ರಶ್ನಿಸಿ 2018ರ ಮಾರ್ಚ್ ತಿಂಗಳಲ್ಲೇ ಸಿಬಿಐ ಅರ್ಜಿ ಸಲ್ಲಿಸಿತ್ತು. ಈ ಹಿಂದೆ ಐವರು ನ್ಯಾಯಮೂರ್ತಿಗಳು ಪ್ರಕರಣದ ವಿಚಾರಣೆ ನಡೆಸಿದ್ದರು. ಮಾರ್ಚ್ 14ರಂದು ನ್ಯಾಯಮೂರ್ತಿ ಶರ್ಮಾ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದ್ದರು.
2ಜಿ ಹಗರಣಕ್ಕೆ ಸಂಬಂಧಿಸಿದ ಸಿಬಿಐ ಮತ್ತು ಇ.ಡಿ ಪ್ರಕರಣಗಳಲ್ಲಿ ಆರೋಪಿಗಳಾದ ರಾಜಾ, ಡಿಎಂಕೆ ಸಂಸದೆ ಕನಿಮೋಳಿ ಮತ್ತು ಇತರರನ್ನು 2017 ಡಿಸೆಂಬರ್ 21ರಂದು ಖುಲಾಸೆ ಮಾಡಿ ವಿಶೇಷ ನ್ಯಾಯಾಲಯ ತೀರ್ಪಿತ್ತಿತ್ತು.
ವಿಶೇಷ ನ್ಯಾಯಾಲಯದ ತೀರ್ಪು ಪ್ರಶ್ನಿಸಿ 2018ರ ಮಾರ್ಚ್ 20ರಂದು ಸಿಬಿಐ, ದೆಹಲಿ ಹೈಕೋರ್ಟ್ ಮೊರೆಹೋಗಿತ್ತು.