ಮುಂಬೈ: ಬಿಜೆಪಿ ವಿರುದ್ಧ ಮತ್ತೆ ಟೀಕಾ ಪ್ರಹಾರ ಮುಂದುವರಿಸಿರುವ ಶಿವಸೇನಾ, ’ಹಿಂದುತ್ವ’ ಕಾರ್ಯಸೂಚಿಯನ್ನು ಮರೆತಿದೆ ಎಂದು ಕಿಡಿಕಾರಿದೆ.
‘ಹಿಂದುತ್ವ ಏಣಿ’ ಮೂಲಕ ಅಧಿಕಾರದ ಗದ್ದುಗೆ ಏರಿದ್ದ ಬಿಜೆಪಿ ತನ್ನ ಉದ್ದೇಶ ಈಡೇರಿದ ಬಳಿಕ ಅದನ್ನು ಮೂಲೆಗೆಸೆದಿದೆ ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಬರೆದಿದೆ.
ರಾಮ ಮಂದಿರ ನಿರ್ಮಾಣ, ಏಕರೂಪ ನಾಗರಿಕ ಸಂಹಿತೆ ಸೇರಿದಂತೆ ಹಿಂದೂಗಳಿಗೆ ನೀಡಿದ್ದ ಯಾವುದೇ ಭರವಸೆಗಳನ್ನು ಬಿಜೆಪಿ ಈಡೇರಿಸಿಲ್ಲ. ಅಧಿಕಾರಕ್ಕೆ ಬರುವ ಮುನ್ನ ಇಂತಹ ವಿಷಯಗಳನ್ನೇ ಹಿಂದೂಗಳ ಮುಂದೆ ಬಿಜೆಪಿ ಮಂಡಿಸಿತ್ತು ಎಂದು ಟೀಕಿಸಿದೆ.
ಷಿಕಾಗೊದಲ್ಲಿ ಇತ್ತೀಚೆಗೆ ನಡೆದ ಹಿಂದೂಗಳ ಸಮಾವೇಶದಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹಿಂದೂಗಳು ಪ್ರಾಬಲ್ಯ ಸಾಧಿಸುವುದಿಲ್ಲ ಎಂದು ನೀಡಿರುವ ಹೇಳಿಕೆಗೂ ಆಕ್ಷೇಪ ವ್ಯಕ್ತಪಡಿಸಿರುವ ಶಿವಸೇನಾ, ದೇಶದಲ್ಲಿನ ಪ್ರಸ್ತುತ ವಿಷಯಗಳ ಬಗ್ಗೆ ಅವರು ಮಾತನಾಡಬೇಕಾಗಿತ್ತು ಎಂದು ಹೇಳಿದೆ.
ಬಿಜೆಪಿ ದ್ವಿಮುಖ ನೀತಿ: ತೊಗಡಿಯಾ
ಮಥುರಾ (ಪಿಟಿಐ): ರಾಮಮಂದಿರ ವಿಷಯದಲ್ಲಿ ಬಿಜೆಪಿ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಅಂತರರಾಷ್ಟ್ರೀಯ ಹಿಂದೂ ವಿಶ್ವ ಪರಿಷತ್ (ಎಎಚ್ಪಿ) ಅಧ್ಯಕ್ಷ ಪ್ರವೀಣ್ ತೊಗಡಿಯಾ ಟೀಕಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಭರವಸೆ ಈಡೇರಿಸಲು ಸಾಧ್ಯವಾಗದಿದ್ದರೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕು ಬಿಜೆಪಿಗೆ ಇಲ್ಲ ಎಂದು ತಿಳಿಸಿದ್ದಾರೆ.
ತ್ರಿವಳಿ ತಲಾಖ್ ನಿಷೇಧಿಸಲು ಕಾಯ್ದೆ ರೂಪಿಸಿರುವ ಕೇಂದ್ರ ಸರ್ಕಾರ ರಾಮಮಂದಿರ ನಿರ್ಮಿಸಲು ಇದೇ ರೀತಿಯ ದಿಟ್ಟತನ ಏಕೆ ಪ್ರದರ್ಶಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.