ಎರಡು ತಿಂಗಳ ಹಿಂದಿನವರೆಗೂ ಬಿಹಾರದಲ್ಲಿ ಎನ್ಡಿಎ ಸುಲಭವಾಗಿ ಗೆಲ್ಲುತ್ತದೆ ಎಂಬ ವಾತಾವರಣವಿತ್ತು. ಆದರೆ ತೇಜಸ್ವಿ ಅವರು ರಾಜಕೀಯವಾಗಿ ಔಚಿತ್ಯ ಕಳೆದುಕೊಂಡಿದ್ದ ಜೀತನ್ರಾಮ್ ಮಾಂಝಿ, ಉಪೇಂದ್ರ ಕುಶ್ವಾಹ ಹಾಗೂ ಮುಕೇಶ್ ಸಾಹ್ನಿ ಅವರನ್ನು ಘಟಬಂಧನದಿಂದ ಹೊರಗಿಟ್ಟರು. ಕಾಂಗ್ರೆಸ್ ಮೇಲಿನ ಅವಲಂಬನೆಯನ್ನು ಸ್ವಲ್ಪ ಕಡಿಮೆಮಾಡಿ, ಮೂರು ಎಡ ಪಕ್ಷಗಳತ್ತ ಹಸ್ತ ಚಾಚಿ ಹೊಸ ಮೈತ್ರಿಯನ್ನು ಬೆಸೆದರು. ಈ ತಂತ್ರವು ಘಟಬಂಧನವನ್ನು ಗೆಲುವಿನ ಅತ್ಯಂತ ಸನಿಹದವರೆಗೆ ಕರೆದೊಯ್ದಿದೆ. ಎನ್ಡಿಎ ಮೈತ್ರಿಕೂಟದಲ್ಲಿ ಬಿಜೆಪಿ, ಜೆಡಿಯು ಜತೆಗೆ ವಿಐಪಿ ಹಾಗೂ ಎಚ್ಎಎಂ ಪಕ್ಷಗಳೂ ಇವೆ ಎಂಬುದನ್ನು ಗಣನೆಗೆ ತೆಗೆದುಕೊಂಡರೆ ಘಟಬಂಧನದ ಸಾಧನೆ ಸಣ್ಣದೇನೂ ಅಲ್ಲ ಎಂಬುದು ಸ್ಪಷ್ಟ.