ಶಿಮ್ಲಾ : ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿ ಭಾನುವಾರವೂ ಮಳೆ ಸುರಿದಿದ್ದರಿಂದ ಪಬ್ಬರ್ ನದಿಯಲ್ಲಿ ದಿಢೀರ್ ಪ್ರವಾಹ ಬಂದಿದ್ದು, ರಸ್ತೆ ಬದಿಯಲ್ಲಿದ್ದ ಉಪಾಹಾರಗೃಹ ಕೊಚ್ಚಿಕೊಂಡು ಹೋಗಿದೆ. ಇದರೊಳಗಿದ್ದ ಮೂವರ ಮೃತದೇಹ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಂಜಾಬ್ ರಾಜ್ಯ ಸಾರಿಗೆ ನಿಗಮದ ಬಸ್ವೊಂದು ಜುಲೈ 10ರಂದು ಮನಾಲಿಯ ಬಿಯಾಸ್ ನದಿಯಲ್ಲಿ ಮುಳುಗಿದ್ದು, ಶನಿವಾರ ಅವಶೇಷ ಪತ್ತೆಯಾಗಿದೆ. ಆದರೆ ಇದೂವರೆಗೂ ಅದರೊಳಗಿದ್ದ 11 ಪ್ರಯಾಣಿಕರ ಪತ್ತೆಯಾಗಿಲ್ಲ.
‘ನಾಪತ್ತೆಯಾದ ಪ್ರಯಾಣಿಕರು ಉತ್ತರಪ್ರದೇಶದಿಂದ ಬಂದವರು. ಬಸ್ ಮುಳುಗಿದಾಗ ಅದರೊಳಗಿದ್ದರು ಎಂಬುದು ಗೊತ್ತಾಗಿದೆ. ಶೋಧ ನಡೆದಿದೆ’ ಎಂದು ಕುಲ್ಲು ಪೊಲೀಸ್ ವರಿಷ್ಠಾಧಿಕಾರಿ ಸಾಕ್ಷಿ ವರ್ಮಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.