ನವದೆಹಲಿ:ದೇಶವ್ಯಾಪಿ 21 ದಿನಗಳ ಲಾಕ್ಡೌನ್ ಘೋಷಿಸಿದ್ದರೂ ಜನರು ಮದುವೆ, ತಿಥಿ ಇನ್ನಿತರ ಧಾರ್ಮಿಕಕಾರ್ಯಕ್ರಮಗಳನ್ನು ನಿಲ್ಲಿಸಿಲ್ಲ. ಆರೋಗ್ಯ ಸಚಿವಾಲಯದ ಪ್ರಕಾರ ದೇಶದಲ್ಲಿ ಕೊರೊನಾಸೋಂಕು ದೃಢಪಟ್ಟವರ ಸಂಖ್ಯೆ 3,577 ಆಗಿದೆ. ಅಂದರೆ ನಾಲ್ಕು ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ದುಪಟ್ಟು ಆಗಿದೆ.
ತಬ್ಲೀಗಿ ಜಮಾತ್ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಬಹುತೇಕ ಮಂದಿಗೆ ಸೋಂಕು ತಗುಲಿದ್ದು, ದೇಶದಾದ್ಯಂತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ನಡುವೆ ಪರಿಸ್ಥಿತಿ ಇಷ್ಟೊಂದು ಗಂಭೀರವಾಗಿದ್ದರೂ ಜನರು ರಾಮನವಮಿ, ಪಾಮ್ ಸಂಡೇ ಆಚರಿಸಿದ್ದಾರೆ.
ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಈಸ್ಟರ್ ಭಾನುವಾರದ ಮುನ್ನ ಆಚರಿಸುವ ಪಾಮ್ ಸಂಡೇ ಪ್ರಾರ್ಥನೆಗೆ 150 ಜನರನ್ನು ಸೇರಿಸಿದ್ದಕ್ಕೆ ಧರ್ಮಗುರುವನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನದ ಬುಂಡಿ ಮತ್ತು ರಾಮನಗರ ಜಿಲ್ಲೆಯಲ್ಲಿ ಶುಕ್ರವಾರ ನೇಜಾ ಕೀ ಸವಾರಿ ಎಂಬ ಧಾರ್ಮಿಕ ಕಾರ್ಯಕ್ರಮದಲ್ಲಿ ಸರಿಸುಮಾರು 1000 ಮಂದಿ ಭಾಗವಹಿಸಿದ್ದರು. ಒಂದಷ್ಟು ಮಂದಿ ಮನೆಯ ಟೆರೇಸ್ ಮೇಲೆ ಜಮಾಯಿಸಿದರೆ ಇನ್ನು ಕೆಲವರು ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ್ದಾರೆ. ತಕ್ಷಣವೇ ಪೊಲೀಸರು ಅಲ್ಲಿಗೆ ಧಾವಿಸಿ ಜನರನ್ನು ಚದುರಿಸಿದ್ದಾರೆ. ಲಾಕ್ಡೌನ್ ಉಲ್ಲಂಘಿಸಿದ 5 ಮಂದಿಯನ್ನು ಬಂಧಿಸಿ ಎಫ್ಐಆರ್ ದಾಖಲಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಕೊರೊನಾ ಸೋಂಕು ಇರುವ ವ್ಯಕ್ತಿಯ ಮನೆಯಲ್ಲಿ ನಡೆದ ತಿಥಿಯೂಟ ಕಾರ್ಯಕ್ರಮದಲ್ಲಿ ಸಾವಿರಕ್ಕಿಂತಲೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳ ಜತೆ ಸಂಪರ್ಕ ಹೊಂದಿರುವ 26,000 ಮಂದಿಯನ್ನು ಕ್ವಾರಂಟೈನ್ನಲ್ಲಿರಿಸಲಾಗಿದೆ.
ಚಂಡೀಗಢದಲ್ಲಿ ಗುರ್ಬಾನಿ ನಿರೂಪಕ ಮತ್ತು ಪದ್ಮಶ್ರೀ ಪುರಸ್ಕೃತ ಭಾಯಿ ನಿರ್ಮಲ್ ಸಿಂಗ್ ಖಾಲ್ಸಾ ಏಪ್ರಿಲ್ 2 ರಂದು ಕೋವಿಡ್ ರೋಗದಿಂದ ಸಾವಿಗೀಡಾಗಿದ್ದಾರೆ.ಮಾರ್ಚ್ 19ರಂದು ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಸಿಂಗ್ ಭಾಗವಹಿಸಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 84 ಮಂದಿಯನ್ನು ಕ್ವಾರಂಟೈನ್ನಲ್ಲಿರಿಸಲಾಗಿದೆ.