ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಇಂಡಿಯಾ’ ಅಧಿಕಾರಕ್ಕೆ ಬಂದರೆ ಮೀಸಲಾತಿಗೆ ಇರುವ ಶೇ 50ರ ಮಿತಿ ರದ್ದು: ರಾಹುಲ್

Published 5 ಫೆಬ್ರುವರಿ 2024, 15:37 IST
Last Updated 5 ಫೆಬ್ರುವರಿ 2024, 15:37 IST
ಅಕ್ಷರ ಗಾತ್ರ

ರಾಂಚಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಇಂಡಿಯಾ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ ಜಾತಿವಾರು ಸಮೀಕ್ಷೆ ನಡೆಸುತ್ತೇವೆ ಮತ್ತು ಮೀಸಲಾತಿಗೆ ಇರುವ ಶೇ 50ರ ಮಿತಿಯನ್ನು ರದ್ದು ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದರು.

ಮುಖ್ಯಮಂತ್ರಿ ಬುಡಕಟ್ಟು ಜನಾಂಗದವರಾಗಿರುವುದರಿಂದ ಜಾರ್ಖಂಡ್‌ನಲ್ಲಿ ಜೆಎಂಎಂ, ಕಾಂಗ್ರೆಸ್, ಆರ್‌ಜೆಡಿ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸಿದೆ ಎಂದು ಅವರು ಆರೋಪಿಸಿದರು.

‘ಬಿಜೆಪಿ-ಆರ್‌ಎಸ್‌ಎಸ್ ಪಿತೂರಿಯನ್ನು ನಿಗ್ರಹಿಸಿ ಬಡವರ ಸರ್ಕಾರವನ್ನು ರಕ್ಷಿಸಿದ ಸಿಎಂ ಸೊರೇನ್ ಜೀ ಮತ್ತು ಮೈತ್ರಿಕೂಟದ ಎಲ್ಲ ಶಾಸಕರನ್ನು ಅಭಿನಂದಿಸಲು ಬಯಸುತ್ತೇನೆ’ಎಂದು ಇಲ್ಲಿನ ಶಾಹೀದ್ ಮೈದಾನದಲ್ಲಿ ನಡೆದ ರ್‍ಯಾಲಿಯ ಸಂದರ್ಭ ರಾಹುಲ್ ಗಾಂಧಿ ಹೇಳಿದರು.

ದಲಿತರು, ಆದಿವಾಸಿಗಳು, ಇತರೆ ಹಿಂದುಳಿದ ವರ್ಗಗಳನ್ನು ಜೀತದಾಳುಗಳನ್ನಾಗಿ ಮಾಡಲಾಗಿದೆ. ದೊಡ್ಡ ಕಂಪನಿಗಳು, ಆಸ್ಪತ್ರೆಗಳು, ಶಾಲೆಗಳು, ಕಾಲೇಜುಗಳು ಮತ್ತು ನ್ಯಾಯಾಲಯಗಳಲ್ಲಿ ಅವರ ಭಾಗವಹಿಸುವಿಕೆಯ ಕೊರತೆಯಿದೆ ಎಂದು ರಾಹುಲ್ ಪ್ರತಿಪಾದಿಸಿದರು.

‘ಇದು ದೇಶದ ಮುಂದಿರುವ ಬಹುದೊಡ್ಡ ಪ್ರಶ್ನೆಯಾಗಿದ್ದು, ,ದೇಶದಲ್ಲಿ ಜಾತಿ ಸಮೀಕ್ಷೆ ನಡೆಸುವುದು ನಮ್ಮ ಮೊದಲ ಹೆಜ್ಜೆಯಾಗಿದೆ’ಎಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರು ತಿಳಿಸಿದರು.

ಸದ್ಯ ಇರುವ ಕಾನೂನಿನಡಿ ಶೇ 50ಕ್ಕಿಂತ ಹೆಚ್ಚು ಮೀಸಲಾತಿ ನೀಡಲು ಸಾಧ್ಯವಿಲ್ಲ. ಇಂಡಿಯಾ ಮೈತ್ರಿಕೂಟದ ಸರ್ಕಾರ ಬಂದರೆ ಮೀಸಲಾತಿಗೆ ಇರುವ ಶೇಕಡ 50ರ ಮಿತಿಯನ್ನು ಕಿತ್ತೊಗೆಯಲಿದೆ ಎಂದು ಹೇಳಿದರು.

‘ದಲಿತರು ಮತ್ತು ಆದಿವಾಸಿಗಳ ಮೀಸಲಾತಿಯಲ್ಲಿ ಯಾವುದೇ ಕಡಿತ ಇರುವುದಿಲ್ಲ. ಸನಾಜದ ಹಿಂದುಳಿದ ವರ್ಗಗಳ ಜನರಿಗೆ ತಮ್ಮ ಹಕ್ಕು ಸಿಗಲಿದೆ ಎಂಬ ಭರವಸೆ ನೀಡುತ್ತೇನೆ. ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಇದು ದೇಶದ ಅತಿದೊಡ್ಡ ಸಮಸ್ಯೆ’ಎಂದು ರಾಹುಲ್ ಹೇಳಿದರು.

ನಾನೂ ಹಿಂದುಳಿದ ವರ್ಗಕ್ಕೆ ಸೇರಿದವನು ಎಂದು ಪ್ರಧಾನಿ ಮೋದಿ ಹೇಳುತ್ತಿರುತ್ತಾರೆ. ಆದರೆ, ಜಾತಿ ಗಣತಿಯ ಬೇಡಿಕೆ ಮುಂದಿಟ್ಟಾಗ ಶ್ರೀಮಂತರು ಮತ್ತು ಬಡವರು ಎರಡೇ ಜಾತಿ ಇರುವುದು ಎನ್ನುತ್ತಾರೆ. ಒಬಿಸಿ, ದಲಿತರು, ಆದಿವಾಸಿಗಳ ಹಕ್ಕಿನ ವಿಷಯ ಬಂದಾಗ ಜಾತಿ ಇಲ್ಲ ಎಂದು ಮೋದಿಯವರು ಹೇಳುತ್ತಾರೆ. ಮತ ಪಡೆಯುವಾಗ, ನಾನು ಒಬಿಸಿ ಎನ್ನುತ್ತಾರೆ’ಎಂದು ರಾಹುಲ್ ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT