ಅಮರಾವತಿ: ‘ಮುಂದಿನ ಐದು ದಿನಗಳಲ್ಲಿ (ಮೇ 23ರಿಂದ 27) ಆಂಧ್ರ ಪ್ರದೇಶದ ಹಲವು ಭಾಗಗಳಲ್ಲಿ ಮಳೆ ಸುರಿಯಲಿದೆ. ಜೊತೆಗೆ, ಗುಡುಗು–ಮಿಂಚು, ವೇಗದ ಗಾಳಿಯೂ ಬರುವ ನಿರೀಕ್ಷೆ ಇದೆ’ ಎಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ಮುನ್ಸೂಚನೆ ನೀಡಿದೆ.
‘ರಾಜ್ಯದ ಉತ್ತರ ಕರಾವಳಿ, ಯಾನಮ್, ದಕ್ಷಿಣ ಕರಾವಳಿ ಮತ್ತು ರಾಯಲಸೀಮಾ ಭಾಗಗಳಲ್ಲಿ ಮಳೆ ಬೀಳಲಿದೆ. ಇದೇ ವೇಳೆ ರಾಜ್ಯದ ಉತ್ತರ ಕರಾವಳಿ ಭಾಗದಲ್ಲಿ ಶುಕ್ರವಾರ ಅಧಿಕ ಮಳೆಯಾಗಲಿದೆ. ಗಾಳಿಯು ಗಂಟೆಗೆ 50 ಕಿ.ಮೀ ವೇಗದಲ್ಲಿ ಬೀಸುವ ನಿರೀಕ್ಷೆ ಇದೆ’ ಎಂದು ಇಲಾಖೆ ಹೇಳಿದೆ.
‘ನಿರೀಕ್ಷೆಗೂ ಮುನ್ನವೇ ಬಂಗಾಳ ಕೊಲ್ಲಿಯ ದಕ್ಷಿಣ ಭಾಗಕ್ಕೆ ನೈರುತ್ಯ ಮುಂಗಾರು ಬರಲಿದೆ. ಮುಂದಿನ ಎರಡು ದಿನಗಳಲ್ಲಿ ಅಂಡಮಾನ್ ನಿಕೋಬಾರ್ ದ್ವೀಪದ ಕೆಲವು ಭಾಗಗಳಲ್ಲಿ, ಬಂಗಾಳ ಕೊಲ್ಲಿಯ ಕೇಂದ್ರ ಭಾಗದ ಪೂರ್ವಕ್ಕೆ ಇನ್ನೆರಡು ದಿನಗಳಲ್ಲಿ ಮುಂಗಾರು ಬರಲಿದೆ’ ಎಂದು ಇಲಾಖೆ ತಿಳಿಸಿದೆ.