ಕೋಲ್ಕತ್ತ: ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಮತ್ತು ಅವರ ಪುತ್ರ ಸುಭ್ರಾಘ್ಷು ರಾಯ್ ಬಿಜೆಪಿ ತೊರೆದು ಶುಕ್ರವಾರ ಮತ್ತೆ ತೃಣಮೂಲ ಕಾಂಗ್ರೆಸ್ಗೆ (ಟಿಎಂಸಿ) ಸೇರ್ಪಡೆಯಾಗಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಮುಕುಲ್ ನಮ್ಮ ಪಕ್ಷಕ್ಕೆ ಮರಳಿದ್ದಾರೆ. ವಿಧಾನಸಭೆ ಚುನಾವಣೆ ಸಮಯದಲ್ಲಿ ಅವರು ನಮ್ಮೊಂದಿಗೆ ಯಾವುದೇ ವಿಚಾರಗಳನ್ನು ಹಂಚಿಕೊಂಡಿರಲಿಲ್ಲ’ ಎಂದು ಹೇಳಿದರು.
‘ಚುನಾವಣೆ ಸಂದರ್ಭದಲ್ಲಿ ಟಿಎಂಸಿ ಬಗ್ಗೆ ಕೀಳಾಗಿ ಮಾತನಾಡಿದವರನ್ನು ಯಾವುದೇ ಕಾರಣಕ್ಕೂ ಮರಳಿ ಪಕ್ಷಕ್ಕೆ ಬರಮಾಡಿಕೊಳ್ಳುವುದಿಲ್ಲ’ ಎಂದು ಮಮತಾ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಟಿಎಂಸಿ ಮುಖಂಡ ಪಾರ್ಥ ಚಟ್ಟೋಪಾಧ್ಯಾಯ ಮಾತನಾಡಿ, ರಾಯ್ ಮರಳಿ ಪಕ್ಷಕ್ಕೆ ಸೇರುತ್ತಿರುವ ಬಗ್ಗೆ ಫೋಷಿಸಿದ್ದಾರೆ. ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ ಅವರು ಮುಕುಲ್ ರಾಯ್, ಸುಭ್ರಾಘ್ಷು ರಾಯ್ ಅವರನ್ನು ಸ್ವಾಗತಿಸಿದ್ದಾರೆ.
ಮುಕುಲ್ ರಾಯ್ ಮಮತಾ ಬ್ಯಾನರ್ಜಿ ಅವರ ಆಪ್ತ ಬಳಗದಲ್ಲಿದ್ದ ಗುರುತಿಸಿಕೊಂಡಿದ್ದ ಮುಖಂಡ. 2017ರಲ್ಲಿ ಅವರು ಬಿಜೆಪಿ ಸೇರ್ಪಡೆಗೊಂಡಿದ್ದರು.
ಮುಕುಲ್ ರಾಯ್ ಅವರು ಬಿಜೆಪಿಯ ಪ್ರಮುಖ ಸಭೆಗೆ ಗೈರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಕೋವಿಡ್ ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮುಕುಲ್ ರಾಯ್ ಅವರ ಪತ್ನಿಯನ್ನು ಭೇಟಿಯಾಗಿದ್ದ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಆರೋಗ್ಯ ವಿಚಾರಿಸಿದ್ದರು.