ನವದೆಹಲಿ: ಕೋವಿಡ್–19 ಸಾಂಕ್ರಾಮಿಕಕ್ಕೆ ತುತ್ತಾಗಿ 229 ಮಂದಿ ತೆರಿಗೆ ಅಧಿಕಾರಿಗಳು ತಮ್ಮ ಜೀವ ಕಳೆದುಕೊಂಡಿದ್ದು, ದೇಶವು ಅವರ ಕರ್ತವ್ಯಪರತೆಯನ್ನು ಸ್ಮರಿಸಲಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ.
ಪರೋಕ್ಷ ತೆರಿಗೆಗಳ ಕೇಂದ್ರೀಯ ಮಂಡಳಿಯ (ಸಿಬಿಐಸಿ) 110 ಅಧಿಕಾರಿಗಳು ಹಾಗೂ ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯ (ಸಿಬಿಡಿಟಿ) 119 ಅಧಿಕಾರಿಗಳು ತಮ್ಮ ಕರ್ತವ್ಯದ ಸಂದರ್ಭದಲ್ಲಿ ಕೋವಿಡ್ನಿಂದ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
‘ಬಿಕ್ಕಟ್ಟಿನ ಈ ಸಂದರ್ಭದಲ್ಲಿ ದೇಶ ಸೇವೆಯಲ್ಲಿ ಪ್ರಾಣವನ್ನು ಪಣಕ್ಕಿಡುತ್ತಿದ್ದೀರಿ. ನಿಮ್ಮ ಸೇವೆಯ ಕಾರಣದಿಂದಾಗಿಯೇ ವಿವಿಧ ಬಂದರುಗಳಲ್ಲಿ ಆಮ್ಲಜನಕ ಸಿಲಿಂಡರ್ನಂತಹ ಅತ್ಯಗತ್ಯ ವೈದ್ಯಕೀಯ ಉಪಕರಣಗಳು ದೇಶದೊಳಕ್ಕೆ ತ್ವರಿತವಾಗಿ ಪೂರೈಕೆ ಆಗುತ್ತಿದೆ’ ಎಂದು ತೆರಿಗೆ ಅಧಿಕಾರಿಗಳ ಕಾರ್ಯವೈಖರಿಗೆ ಇದೇ ವೇಳೆ ಅವರು ಮೆಚ್ಚುಗೆ ಸೂಚಿಸಿದ್ದಾರೆ.