ಹೈದರಾಬಾದ್: ಇಡೀ ವಿಶ್ವವೇ ಇಂದು ಭಾರತವನ್ನು ‘ವಿಶ್ವ ಮಿತ್ರ’ ಎಂಬಂತೆ ಕಾಣುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.
ಕಾನ್ಹಾ ಶಾಂತಿ ವನಮ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈ ಹಿಂದೆ ಯೋಗ ಜ್ಞಾನ ಮತ್ತು ಆಯುರ್ವೇದದ ಪದ್ಧತಿಗಳ ಮೇಲೆ ದಾಳಿಗೆ ತುತ್ತಾಗಿ ಅಪಾರ ನಷ್ಟವನ್ನು ದೇಶ ಅನುಭವಿಸಿದೆ ಎಂದರು.
‘ಇದೀಗ ಕಾಲ ಬದಲಾಗಿದೆ. ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ನಮ್ಮ(ಭಾರತೀಯರ) ನಿರ್ಧಾರಗಳು, ಕೆಲಸಗಳು ಮುಂದಿನ ಪೀಳಿಗೆಯ ಭವಿಷ್ಯವನ್ನು ನಿರ್ಧರಿಸುತ್ತದೆ’ ಎಂದು ಹೇಳಿದರು.
‘ಅಭಿವೃದ್ಧಿ ಹೊಂದುತ್ತಿರುವ ಭಾರತವು ಜಗತ್ತಿಗೆ ತಾನು ವಿಶ್ವ ಮಿತ್ರ (ವಿಶ್ವದ ಸ್ನೇಹಿತ) ಎಂಬುದನ್ನು ನೋಡುತ್ತಿದೆ. ಕೊರೊನಾ ನಂತರ ನಾವು ಜಗತ್ತಿನ ಜತೆ ನಿಂತ ರೀತಿ ಇಂದು ಭಾರತವು ತಾನು ನಿಮ್ಮ ಸ್ನೇಹಿತ ಎಂದು ಜಗತ್ತಿಗೆ ಬಿಡಿಸಿ ಹೇಳಬೇಕಾಗಿಲ್ಲ’ ಎಂದು ಮೋದಿ ಹೇಳಿದರು.
2020ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ವಿಶ್ವದಾದ್ಯಂತ ವ್ಯಾಪಿಸಿದ ನಂತರ ದೇಶೀಯ ಸಂಸ್ಥೆಗಳು ತಯಾರಿಸಿದ ಕೋವಿಡ್ ಲಸಿಕೆಗಳನ್ನು ಹಲವು ದೇಶಗಳಿಗೆ ವಿತರಿಸಿದ್ದನ್ನು ಮೋದಿ ಪ್ರಸ್ತಾಪಿಸಿದರು.