* ಸುಪ್ರೀಂ ಕೋರ್ಟ್ ಎಂಬ ಸಂಸ್ಥೆಗೆ ಹಾನಿ ಮಾಡಿದ್ದೀರಿ ಎಂದು ಇಡೀ ನ್ಯಾಯಾಂಗ ವ್ಯವಸ್ಥೆಯೇ ಭಾವಿಸಿದೆ ಎಂದು ಭಾರತೀಯ ವಕೀಲರ ಪರಿಷತ್ತು (ಬಿಸಿಐ) ನಿಮ್ಮ ವಿರುದ್ಧ ಹರಿಹಾಯ್ದಿದೆ. ನಿಮ್ಮ ಪ್ರತಿಕ್ರಿಯೆ ಏನು?
ಬಿಸಿಐಯ ಹಿಂದೆ ಇಡೀ ನ್ಯಾಯಾಂಗ ವ್ಯವಸ್ಥೆಯೇ ಇದೆ ಎಂದು ಅವರು ಹೇಗೆ ಹೇಳುವುದಕ್ಕೆ ಸಾಧ್ಯ? ನಾನು ಮಾಡಿದ್ದು ಸರಿಯಾಗಿದೆ ಎಂದು ಹಲವು ಮಂದಿ ನನ್ನಲ್ಲಿ ಹೇಳಿದ್ದಾರೆ. ಮಹಾತ್ಮ ಗಾಂಧಿಯನ್ನು ಕೂಡ ದೇಶದ ಎಲ್ಲ ಜನರು ಬೆಂಬಲಿಸಿರಲಿಲ್ಲ. ವೈಯಕ್ತಿಕವಾಗಿ ಗೌರವವಿದ್ದ ಹಲವರು, ಅವರ ರಾಜಕೀಯ ನಿಲುವುಗಳನ್ನು ವಿರೋಧಿಸಿದ್ದರು. ಬಿಸಿಐ ಮಾತುಗಳಲ್ಲಿ ತರ್ಕವೇ ಇಲ್ಲ
* ರಾಜಕೀಯ ಹಸ್ತಕ್ಷೇಪದಿಂದ ನ್ಯಾಯಾಂಗವನ್ನು ರಕ್ಷಿಸುವುದು ಹೇಗೆ?
ಅದು ಅಸಾಧ್ಯ. ರಾಜಕೀಯ ಹಸ್ತಕ್ಷೇಪ ಕೆಲವೊಮ್ಮೆ ಸೂಕ್ಷ್ಮವಾಗಿದ್ದರೆ ಕೆಲವೊಮ್ಮೆ ನೇರವಾಗಿಯೇ ಇರುತ್ತದೆ. ಅಮೆರಿಕದಂತಹ ದೇಶಗಳಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ರಾಜಕೀಯ ನೆಲೆಯಲ್ಲಿಯೇ ನೇಮಿಸಲಾಗುತ್ತದೆ. ಅಮೆರಿಕದ ಅಧ್ಯಕ್ಷರು ನ್ಯಾಯಮೂರ್ತಿಯ ನಾಮನಿರ್ದೇಶನ ಮಾಡಿದ ಬಳಿಕ ಅವರ ವಿಶ್ವಾಸಾರ್ಹತೆಯನ್ನು ಸಮಗ್ರವಾಗಿ ಒರೆಗೆ ಹಚ್ಚಲಾಗುತ್ತದೆ. ಅದಾದ ಬಳಿಕವಷ್ಟೇ ಸಂಸತ್ತು ಈ ನಾಮಕರಣಕ್ಕೆ ಅನುಮೋದನೆ ನೀಡುತ್ತದೆ.
ನ್ಯಾಯಮೂರ್ತಿ ಯಾವ ಪಕ್ಷಕ್ಕೆ ಸೇರಿದವರು ಎಂಬುದು ಪ್ರಶ್ನೆಯೇ ಅಲ್ಲ. ಅವರು ಯಾವ ತೀರ್ಪುಗಳನ್ನು ಕೊಡುತ್ತಾರೆ ಮತ್ತು ಅದಕ್ಕೆ ಯಾವುದಾದರೂ ಸೈದ್ಧಾಂತಿಕ ಹಿನ್ನೆಲೆ ಇದೆಯೇ ಎಂಬುದು ಮುಖ್ಯ. ಪದಗಳನ್ನು ಸರಿಯಾಗಿ ಉಚ್ಚರಿಸಲಿಕ್ಕೇ ಬಾರದವರು ರಾಜಕೀಯದ ಬಗ್ಗೆ ಮಾತ್ರ ಮಾತನಾಡುತ್ತಾರೆ.
* ನಿವೃತ್ತ ಜೀವನಕ್ಕೆ ಯೋಜನೆಗಳೇನು? ರಾಜಕೀಯ ಆಕಾಂಕ್ಷೆಗಳು ಇವೆಯೇ?
ನಿವೃತ್ತನಾಗಿ ಕೆಲವು ದಿನಗಳಷ್ಟೇ ಆದವು. ನಾನೇನು ಮಾಡಬೇಕು ಎಂಬ ಬಗ್ಗೆ ಚಿಂತಿಸಬೇಕು. ಈ ಗ್ರಾಮವೇ ನನ್ನ ಶಾಶ್ವತ ವಿಳಾಸ. ನನ್ನ ಮಕ್ಕಳೆಲ್ಲರೂ ಹೈದರಾಬಾದ್ನಲ್ಲಿ ಇರುವುದರಿಂದ ಸದಾ ಇಲ್ಲಿಯೇ ಇರುತ್ತೇನೆ ಎಂದು ಹೇಳುವುದು ಕಷ್ಟ. ಆಯೋಗಗಳ ಅಧ್ಯಕ್ಷ ಸ್ಥಾನದಂತಹ ಹುದ್ದೆಗಳನ್ನು ಸ್ವೀಕರಿಸುವುದಿಲ್ಲ ಎಂಬುದನ್ನು ಆಗಲೇ ಸ್ಪಷ್ಟಪಡಿಸಿದ್ದೇನೆ. ಚುನಾವಣೆಗೆ ಸ್ಪರ್ಧಿಸುವ ಅಥವಾ ಯಾವುದಾದರೂ ರಾಜಕೀಯ ಪಕ್ಷ ಸೇರುವ ಸಾಧ್ಯತೆ ಇಲ್ಲ.
ನ್ಯಾಯಮೂರ್ತಿಗಳ ನೇಮಕ ಆಯೋಗದ ಬಗ್ಗೆ ನಾನು ತೀರ್ಪು ನೀಡಿದಾಗ ನನ್ನನ್ನು ಬಿಜೆಪಿ ಮನುಷ್ಯ ಎಂದರು. ಜನವರಿಯಲ್ಲಿ ನಡೆಸಿದ ಮಾಧ್ಯಮಗೋಷ್ಠಿ ಬಳಿಕ ಕಾಂಗ್ರೆಸ್ನವನು ಎಂದರು. ಸಿಪಿಐ ಮುಖಂಡ ಡಿ. ರಾಜಾ ಅವರನ್ನು ಭೇಟಿಯಾದ ಬಳಿಕ ಕಮ್ಯುನಿಸ್ಟ್ ಎಂದರು.
ಪಿತ್ರಾರ್ಜಿತವಾಗಿ ಬಂದ 17–18 ಎಕರೆ ಜಮೀನು ಈ ಗ್ರಾಮದಲ್ಲಿ ಇದೆ. ನಾನು ಹೊಲಕ್ಕೆ ಇಳಿದು ಕೆಲಸ ಮಾಡುವುದಿಲ್ಲ, ನನ್ನ ಹೃದಯದಲ್ಲಿ ಎರಡು ಸ್ಟೆಂಟ್ಗಳಿವೆ. ಆದರೆ, ಸಾವಯವ ಬೇಸಾಯ ಮಾಡಬೇಕು ಎಂದಿದೆ.
* ಸುಪ್ರೀಂ ಕೋರ್ಟ್ಗೆ ನ್ಯಾಯಮೂರ್ತಿಗಳ ಆಯ್ಕೆ ವ್ಯವಸ್ಥೆಯನ್ನು ಬದಲಾಯಿಸಲು ಸಂವಿಧಾನ ತಿದ್ದುಪಡಿ ಮಾಡಬೇಕೇ? ನ್ಯಾಯಮೂರ್ತಿಗಳ ಆಯ್ಕೆಯಲ್ಲಿ ಕೇಂದ್ರದ ಹಸ್ತಕ್ಷೇಪ ಹೆಚ್ಚಾಗುತ್ತಿದೆಯೇ?
ನ್ಯಾಯಮೂರ್ತಿಗಳ ಆಯ್ಕೆಯ ವಿಧಾನದ ಬಗ್ಗೆ ನಾನು ಯಾವತ್ತೂ ಮಾತನಾಡಿಲ್ಲ ಮತ್ತು ಪ್ರತಿಯೊಂದಕ್ಕೂ ಸಂವಿಧಾನ ತಿದ್ದುಪಡಿಯ ಅಗತ್ಯವೂ ಇಲ್ಲ. ನೀತಿಗಳನ್ನು ಯಾವ ರೀತಿ ಜಾರಿ ಮಾಡಲಾಗುತ್ತಿದೆ ಎಂಬ ಬಗ್ಗೆ ಪಾರದರ್ಶಕತೆ ಅಗತ್ಯ ಇದೆ. ನಾನು ಮಾತನಾಡಿದ್ದು ಯಾಕೆ ಮತ್ತು ಮಾತ ನಾಡಿದ ರೀತಿಯ ಬಗ್ಗೆ ಹೇಳಬೇಕು: ಎಡಿಎಂ ಜಬಲ್ಪುರ ಪ್ರಕರಣವನ್ನು ನೆನಪಿ ಸಿಕೊಳ್ಳಿ (ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ನಾಗರಿಕ ಹಕ್ಕುಗಳ ಅಮಾನತನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದ ಪ್ರಕರಣ ಇದು). ಅದು ತಪ್ಪು ಎಂದು ಈಗ ಹೇಳುತ್ತಿರುವ ಜನರು ಆಗ ಒಂದು ಅಕ್ಷರವನ್ನೂ ಮಾತನಾಡಿರಲಿಲ್ಲ. ನಾವು ಯಾರೂ ಅತಿಮಾನವರಲ್ಲ; ಸಾಮಾನ್ಯ ಮನುಷ್ಯರು. ಆದರೆ, ಅವೇ ತಪ್ಪುಗಳು ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.