ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Jharkhand | ಅಪ್ಪ ಶಿಬು ಸೊರೇನ್ 20 ದಿನ; ಮಗ ಹೇಮಂತ್ 24 ಗಂಟೆ ನಾಪತ್ತೆ!

Published 31 ಜನವರಿ 2024, 11:58 IST
Last Updated 31 ಜನವರಿ 2024, 11:58 IST
ಅಕ್ಷರ ಗಾತ್ರ

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣ ಕುರಿತಂತೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ಶೋಧದ ಹಿನ್ನೆಲೆಯಲ್ಲಿ 24 ಗಂಟೆಗಳ ಕಾಲ ‘ಗೋಪ್ಯವಾಗಿ ಉಳಿದಿದ್ದ’ (ತಲೆಮರೆಸಿಕೊಂಡಿದ್ದ) ಜಾರ್ಖಂಡ್‌ನ ಮುಖ್ಯಮಂತ್ರಿ ಹೇಮಂತ್‌ ಸೊರೇನ್ ರಾಂಚಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಇದು ಹೇಮಂತ್‌ ಸೊರೇನ್ ಅವರ ತಂದೆ ಹಾಗೂ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಶಿಬು ಸೊರೇನ್ ಅವರನ್ನು ನೆನಪಿಸಿದೆ.

ಮಗನಂತೆಯೇ 20 ವರ್ಷಗಳ ಹಿಂದೆ ಅಪ್ಪ ಶಿಬು ಸೊರೇನ್ ಕೂಡ ಹೀಗೆ ಬಂಧನದಿಂದ ತಪ್ಪಿಸಿಕೊಳ್ಳಲು 20 ದಿನಗಳಿಗೂ ಹೆಚ್ಚು ಕಾಲ ತಲೆಮರೆಸಿಕೊಂಡಿದ್ದರು. ಸದ್ಯ ಹೇಮಂತ್‌ ಸೊರೇನ್ ಇ.ಡಿಯಿಂದ ತಪ್ಪಿಸಿಕೊಳ್ಳಲು ಕಣ್ಣಾಮುಚ್ಚಾಲೆ ಆಡುತ್ತಿದ್ದರೇ, 2004ರಲ್ಲಿ ಶಿಬು ಸೊರೇನ್ ಜಾರ್ಖಂಡ್‌ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಣ್ಮರೆಯಾಗಿದ್ದರು.

ಹೇಮಂತ್‌ ಸೊರೇನ್ ಪ್ರಕರಣವೇನು?

ಹಣ ಅಕ್ರಮ ವರ್ಗಾವಣೆ, ಅಧಿಕೃತ ಭೂ ದಾಖಲೆಗಳನ್ನು ತಿರುಚಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಭೂಮಿಯನ್ನು ಮಾರಾಟ ಮಾಡಿರುವ ಆರೋಪವನ್ನು ಹೇಮಂತ್‌ ಸೊರೇನ್ ಎದುರಿಸುತ್ತಿದ್ದಾರೆ. ಈ ಮೂಲಕ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ್ದಾರೆ ಎಂಬುದು ತನಿಖಾ ಸಂಸ್ಥೆ ಇ.ಡಿಯ ಆರೋಪವಾಗಿದೆ.

ಈ ಸಂಬಂಧ ಇ.ಡಿ. ಅಧಿಕಾರಿಗಳು ಹೇಮಂತ್‌ ಸೊರೇನ್ ಅವರಿಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿ, ₹ 36 ಲಕ್ಷ ನಗದು, ಬಿಎಂಡಬ್ಲ್ಯೂ ಕಾರು ಮತ್ತು ಅಕ್ರಮಕ್ಕೆ ‘ಪೂರಕವಾಗಿರುವ’ ಕೆಲ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಹೇಮಂತ್‌ ಸೊರೇನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ. ಅಧಿಕಾರಿಗಳು ಹಲವು ಸಲ ನೋಟಿಸ್‌ ಜಾರಿ ಮಾಡಿದ್ದರು. 

ಎರಡು ದಿನಗಳ ಹಿಂದೆ ಹೇಮಂತ್‌ ಸೊರೇನ್ ಇ.ಡಿ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಅವರು ‘ಗೋಪ್ಯವಾಗಿ ಉಳಿದಿದ್ದು‘ ನಿನ್ನೆ (ಮಂಗಳವಾರ) ಕಾಣಿಸಿಕೊಂಡಿದ್ದರು. ಇಂದು (ಬುಧವಾರ) ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರೆ. 

ಶಿಬು ಸೊರೇನ್ ಪ್ರಕರಣವೇನು?

70ರ ದಶಕದಲ್ಲಿ ಜಾರ್ಖಂಡ್‌ ರಾಜ್ಯ ಚಿರುದಿಹ್‌ ಪ್ರಾಂತ್ಯದಲ್ಲಿ ಘರ್ಷಣೆ ನಡೆದಿತ್ತು. ಈ ವೇಳೆ 11 ಜನರನ್ನು ಹತ್ಯೆ ಮಾಡಲಾಗಿತ್ತು. ಇದರ ಹಿಂದೆ ಶಿಬು ಸೊರೇನ್ ಅವರ ಕೈವಾಡ ಇರುವುದಾಗಿ ಪೊಲೀಸರು ನ್ಯಾಯಾಲಯಕ್ಕೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ 2004ರಲ್ಲಿ ಕೋರ್ಟ್‌ ಅವರ ಬಂಧನಕ್ಕೆ ವಾರಂಟ್ ಜಾರಿ ಮಾಡಿತ್ತು. ಹೀಗಾಗಿ ಪೊಲೀಸರು ಜಾರ್ಖಂಡ್‌ ಮತ್ತು ದೆಹಲಿ ರಾಜ್ಯಗಳಲ್ಲಿ ಎಡಬಿಡದೆ ಶೋಧ ನಡೆಸಿದ್ದರು. ಈ ವೇಳೆ ಅವರು 20 ದಿನಗಳಿಗೂ ಹೆಚ್ಚು ಕಾಲ ನಾಪತ್ತೆಯಾಗಿದ್ದರು. 

ವಿಶೇಷವೆಂದರೆ ಕೋರ್ಟ್‌ ಬಂಧನ ವಾರೆಂಟ್‌ ಹೊರಡಿಸಿದಾಗ ಶಿಬು ಸೊರೇನು ಅವರು 2004ರ ಯುಪಿಎ ಸರ್ಕಾರದಲ್ಲಿ ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಸಚಿವರಾಗಿದ್ದರು. ಆಗ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದರು. 

ಈ ಘಟನೆಗೆ ಸಂಬಂಧಿಸಿದಂತೆ ಅಂದಿನ ಯುಪಿಎ ಸರ್ಕಾರ ಮೌನವಹಿಸಿತ್ತು. ಶಿಬು ಸೊರೇನು ನಾಪತ್ತೆ ಬಗ್ಗೆ ಗೃಹ ಸಚಿವಾಲಯ ಕೂಡ ಯಾವುದೇ ಉತ್ತರವನ್ನು ಕೊಟ್ಟಿರಲಿಲ್ಲ. ಸರ್ಕಾರದ ಮೇಲೆ ವಿಪಕ್ಷಗಳು ತೀವ್ರ ಒತ್ತಡ ಹಾಕಿದ್ದರಿಂದ ಅಂದಿನ ಯುಪಿಎ ಸರ್ಕಾರ ಶಿಬು ಸೊರೇನ್ ಅವರಿಂದ ಬಲವಂತವಾಗಿ ರಾಜೀನಾಮೆ ಪಡೆದಿತ್ತು. ಆದರೆ ಮನಮೋಹನ್ ಸಿಂಗ್ ಅವರಿಗೆ ರಾಜೀನಾಮೆ ಸಲ್ಲಿಸುವಾಗಲೂ ಅವರು ಎಲ್ಲಿದ್ದರು ಎಂಬುದು ಬಹಿರಂಗವಾಗಿರಲಿಲ್ಲ. 

ಶಿಬು ಸೊರೇನು ಅವರು ಜನರ ಮುಂದೆ ಕಾಣಿಸಿಕೊಳ್ಳುವುದಕ್ಕೂ ಮೊದಲು ಅವರು ಜಾರ್ಖಂಡ್‌ ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು. ರಾಂಚಿಯಲ್ಲಿ ಅವರ ಪ್ರತ್ಯೇಕ್ಷರಾದಾಗ, ನಾನು ಎಲ್ಲಿಯೂ ಅಡಗಿಕೊಂಡಿರಲಿಲ್ಲ. ಬದಲಾಗಿ ಜಾರ್ಖಂಡ್‌ನ ಹಳ್ಳಿಗಳು ಮತ್ತು ಅರಣ್ಯ ಭಾಗಗಳಲ್ಲಿ ಜನರ ಜತೆ ಸಂವಾದ ನಡೆಸುತ್ತಿದ್ದುದ್ದಾಗಿ ಹೇಳಿಕೊಂಡಿದ್ದರು.

ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ...

ಹೇಮಂತ್‌ ಸೊರೇನ್ ಅವರ ನಡೆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿದೆ. ತಂದೆಯಂತೆಯೇ ಮಗ ಎಂದು ಹಲವರು ಟ್ರೋಲ್‌ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT