ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತೆಗೆ ಸ್ಟಿಕರ್ಸ್‌ ಮೂಲಕ ತರ್ಲೆ ಮಾಡಿದ್ದ ಐಎಎಸ್ ಅಧಿಕಾರಿ ಮೇಲೆ ಕೇಸ್!

ಪತ್ರಕರ್ತೆಗೆ ವಾಟ್ಸ್‌ಆ್ಯಪ್‌ನಲ್ಲಿ ಅಶ್ಲೀಲ ಸ್ಟಿಕರ್ಸ್ ಕಳಿಸಿದ್ದ ಕೇರಳದ ಐಎಎಸ್ ಅಧಿಕಾರಿ ಎನ್ ಪ್ರಶಾಂತ್
Last Updated 9 ಸೆಪ್ಟೆಂಬರ್ 2021, 7:48 IST
ಅಕ್ಷರ ಗಾತ್ರ

ತಿರುವನಂತಪುರಂ: ಕರೆ ಸ್ವೀಕರಿಸುತ್ತಿಲ್ಲ ಎಂದು ಪತ್ರಕರ್ತೆಯೊಬ್ಬರು ವಾಟ್ಸ್‌ಆ್ಯಪ್‌ನಲ್ಲಿ ಪ್ರಶ್ನೆಗಳನ್ನು ಕೇಳಿ ಸಂದೇಶ ಕಳಿಸಿದರೆ, ಅವರಿಗೆ ಅಶ್ಲೀಲ ಸ್ಟಿಕರ್ಸ್‌ ಕಳಿಸುವ ಮೂಲಕ ತರ್ಲೆ ಮಾಡಿದ್ದ ಕೇರಳದ ಐಎಎಸ್ ಅಧಿಕಾರಿ ಎನ್ ಪ್ರಶಾಂತ್ (ಪ್ರಶಾಂತ್ ನಾಯರ್) ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೇರಳದ ‘ಮಾತೃಭೂಮಿ‘ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತೆಯೊಬ್ಬರು ಐಎಎಸ್ ಅಧಿಕಾರಿ ಮಾಡಿದ ಅವಮಾನ ಖಂಡಿಸಿ ಕೇರಳ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ದೂರು ಸಲ್ಲಿಸಿದ್ದರು.

‘ಕೇರಳ ವಿಧಾನಸಭೆ ಚುನಾವಣೆ ನಡೆಯುವ ಸಂದರ್ಭದಲ್ಲಿ ಕೇರಳ ಬಂದರು ಮತ್ತು ಒಳನಾಡು ಸಾರಿಗೆ ನಿಗಮದ (KSINC) ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಪಡೆಯಲು ಪತ್ರಕರ್ತೆ ಏಪ್ರಿಲ್ 6 ರಂದು ನಿಗಮದ ಎಂಡಿ ಎನ್ ಪ್ರಶಾಂತ್ ಅವರಿಗೆ ಕರೆ ಮಾಡಿದ್ದರು. ಆದರೆ, ಅವರು ಕರೆ ಸ್ವೀಕರಿಸಿರಲಿಲ್ಲ. ನಂತರ ಪ್ರತಿಕ್ರಿಯೆ ನೀಡುವಂತೆ ವಾಟ್ಸ್‌ಆ್ಯಪ್‌ನಲ್ಲಿ ಆ ಪತ್ರಕರ್ತೆ ಸಂದೇಶ ಕಳುಹಿಸಿದ್ದರು‘ ಎಂದು ಕೇರಳ ಕಾರ್ಯನಿರತ ಪತ್ರಕರ್ತರ ಸಂಘ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದೆ.

‘ಆದರೆ, ಇದಕ್ಕೆ ಒಬ್ಬ ಜವಾಬ್ದಾರಿಯುತ ಅಧಿಕಾರಿಯಾಗಿ ವಾಪಸ್ ಪ್ರತಿಕ್ರಿಯೆ ನೀಡದೇ ಅಶ್ಲೀಲ ಸ್ಟಿಕರ್ಸ್ ಕಳಿಸಿ ಎನ್ ಪ್ರಶಾಂತ್ ಅವರು ತರ್ಲೆ ಮಾಡಿದ್ದಾರೆ. ಇದರಿಂದ ನನಗೆ ಅವಮಾನವಾಗಿದೆ ಎಂದು ನಮಗೆ ಪತ್ರಕರ್ತೆ ದೂರು ನೀಡಿದ್ದರು. ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿ, ಮುಖ್ಯಮಂತ್ರಿ ಅವರಿಗೆ ಒತ್ತಾಯ ಮಾಡಿದ್ದರಿಂದ ಎನ್ ಪ್ರಶಾಂತ್ ವಿರುದ್ಧ ದೂರು ದಾಖಲಾಗಿದೆ‘ ಎಂದು ಕೇರಳ ಕಾರ್ಯನಿರತ ಪತ್ರಕರ್ತರ ಸಂಘ ತಿಳಿಸಿದೆ.

ಇದೀಗ ದೂರು ದಾಖಲಿಸಿಕೊಂಡಿರುವ ಪೊಲೀಸರು ಎನ್ ಪ್ರಶಾಂತ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT