ತ್ರಿಶೂರ್ (ಪಿಟಿಐ): ಹಣ ಪಾವತಿಸುವಂತೆ ಕೇಳಿದ್ದಕ್ಕೆ ಸಿಟ್ಟಿಗೆದ್ದ ಶಾಸಕ ಪಿ.ಸಿ. ಜಾರ್ಜ್ ಅವರು ಟೋಲ್ ಪ್ಲಾಜಾದ ಗೇಟ್ ಮುರಿದು ಹಾಕಿದ್ದಾರೆ.
ಮಂಗಳವಾರ ರಾತ್ರಿ ತಮ್ಮ ಐಷಾರಾಮಿ ಕಾರಿನಲ್ಲಿ ಕೊಚ್ಚಿಯಿಂದ ತ್ರಿಶೂರ್ಗೆ ವಾಪಸಾಗುತ್ತಿದ್ದ ಶಾಸಕರು, ಪಳಿಯಕ್ಕರ ಎಂಬಲ್ಲಿ ಟೋಲ್ ಅನ್ನು ಪ್ರವೇಶಿಸಿದಾಗ ಈ ಘಟನೆ ನಡೆದಿದೆ. ಕಾರಿನ ಮೇಲೆ ‘ಎಂಎಲ್ಎ ಫಲಕ’ ಇದ್ದರೂ ಪ್ರವೇಶ ನಿರಾಕರಿಸಲಾಯಿತು ಎಂಬುದು ಜಾರ್ಜ್ ಅವರ ವಾದ.
ಕಾರಿನಿಂದ ಇಳಿದ ಶಾಸಕರು, ಬೆಂಬಲಿಗರ ಜೊತೆ ಟೋಲ್ನ ಗೇಟ್ ಅನ್ನು ಮುರಿದುಹಾಕುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. ವಾಹನಗಳು ಸರತಿ ಸಾಲಿನಲ್ಲಿ ಸಾಗುವಾಗ ಸ್ವಲ್ಪ ವಿಳಂಬವಾಯಿತು ಎಂದು ಟೋಲ್ ಸಿಬ್ಬಂದಿ ಹೇಳಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿಲ್ಲ.
ಈ ಹಿಂದೆಯೂ ಅವರು ವಿವಾದದಲ್ಲಿ ಸಿಲುಕಿದ್ದರು. ಶಾಸಕರ ಭವನದಲ್ಲಿ ಊಟವನ್ನು ತಡವಾಗಿ ತಂದವನ ಕಪಾಳಕ್ಕೆ ಬಾರಿಸಿದ್ದರು. ತಮ್ಮ ವಿರುದ್ಧ ಪ್ರತಿಭಟನೆ ನಡೆಸಿದ ಎಸ್ಟೇಟ್ ಕಾರ್ಮಿಕರ ಮೇಲೆ ಪಿಸ್ತೂಲ್ ತೋರಿಸಿದ್ದರು.