ಕೋಲ್ಕತ್ತ: ಸೆಪ್ಟೆಂಬರ್ ತಿಂಗಳಾಂತ್ಯದವರೆಗೆ ಅಥವಾ ಮುಂದಿನ ಆದೇಶದವರೆಗೆ ಪಶ್ಚಿಮ ಬಂಗಾಳದ ಸರ್ಕಾರಿ ಪ್ರಾಯೋಜಿತ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗಳ ಸುಮಾರು 32 ಸಾವಿರ ಶಿಕ್ಷಕರನ್ನು ವಜಾಗೊಳಿಸಿ ಏಕಸದಸ್ಯ ಪೀಠವು ನೀಡಿದ್ದ ಆದೇಶಕ್ಕೆ ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ಮಧ್ಯಂತರ ತಡೆ ನೀಡಿದೆ.
2014ರ ಶಿಕ್ಷಕರ ಅರ್ಹತಾ ಪರೀಕ್ಷೆ ಆಧಾರದ ಮೇಲೆ, 2016ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕಗೊಂಡ, ತರಬೇತಿ ಪೂರ್ಣಗೊಳಿಸದ ಸುಮಾರು 32 ಸಾವಿರ ಶಿಕ್ಷಕರನ್ನು ವಜಾಗೊಳಿಸಿ ಏಕಸದಸ್ಯ ಪೀಠವು ಮೇ 12ರಂದು ಆದೇಶ ಹೊರಡಿಸಿತ್ತು.
ಆದರೆ ಈ ಆದೇಶಕ್ಕೆ ನ್ಯಾಯಮೂರ್ತಿಗಳಾದ ಸುಬ್ರತಾ ತಾಲೂಕ್ದಾರ್ ಹಾಗೂ ಸುಪ್ರತಿಮ್ ಭಟ್ಟಾಚಾರ್ಯ ಅವರಿದ್ದ ವಿಭಾಗೀಯ ಪೀಠವು ತಡೆಯಾಜ್ಞೆ ನೀಡಿದೆ.
‘ಪಶ್ಚಿಮ ಬಂಗಾಳ ಪ್ರಾಥಮಿಕ ಶಿಕ್ಷಣ ಮಂಡಳಿ ಹಾಗೂ ಕೆಲವು ಬಾಧಿತ ಶಿಕ್ಷಕರು ಸಲ್ಲಿಸಿದ ಅರ್ಜಿಯ ಆಧಾರ ಮೇಲೆ, ತಮ್ಮ ಸಮರ್ಥನೆಗೂ ನ್ಯಾಯಯುತ ಅವಕಾಶ ಕೊಡದೇ ಶಿಕ್ಷಕರನ್ನು ವಜಾಗೊಳಿಸಿರುವ ಪ್ರಕ್ರಿಯೆಯು ನ್ಯಾಯಾಂಗದ ಮಧ್ಯಸ್ಥಿಕೆಯನ್ನು ಕೋರುತ್ತದೆ’ ಎಂದು ವಿಭಾಗೀಯ ಪೀಠ ಹೇಳಿದೆ.