ಕೊಲಂಬೊ: ಶ್ರೀಲಂಕಾದಲ್ಲಿ ಭಾನುವಾರ ಎಂಟು ಕಡೆ ನಡೆದ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 300ಕ್ಕೆ ಏರಿಕೆಯಾಗಿದೆ. ಈ ದಾಳಿಯಲ್ಲಿ ಏಳು ಆತ್ಮಹತ್ಯಾ ಬಾಂಬರ್ಗಳು ಪಾಲ್ಗೊಂಡಿದ್ದರು ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಆದರೆ,ಪ್ರಕರಣ ಸಂಬಂಧ ಈವರೆಗೆ 24 ಶಂಕಿತರನ್ನು ಬಂಧಿಸಲಾಗಿದೆ.‘ಬಂಧಿತರ ಬಗ್ಗೆ ಯಾವುದೇ ಮಾಹಿತಿ ಹೇಳಲಾಗುವುದಿಲ್ಲ. ಅವರಿಗೆ ಪ್ರಚಾರ ನೀಡಬಾರದು’ ಎಂದು ಸರ್ಕಾರ ಹೇಳಿದೆ.
‘ಶಾಂಗ್ರಿ ಲಾ, ಕಿಂಗ್ಸ್ಬರಿ ಮತ್ತು ಸಿನ್ನಾಮನ್ ಗ್ರ್ಯಾಂಡ್ ಹೋಟೆಲ್ ಹಾಗೂ ಸೇಂಟ್ ಅಂಥೋನಿ, ಸೇಂಟ್ ಸೆಬಾಸ್ಟಿಯನ್ ಹಾಗೂ ಝಿಯೋನ್ ಚರ್ಚ್ನಲ್ಲಿ ನಡೆದ ದಾಳಿಗಳು ಆತ್ಮಹತ್ಯಾ ಬಾಂಬರ್ಗಳು ನಡೆಸಿದ ದಾಳಿಗಳುಎಂದುಗುರುತಿಸಲಾಗಿದೆ’ಎಂದುಸರ್ಕಾರಹೇಳಿದೆ.
‘ಸ್ಫೋಟಕಗಳನ್ನು ತುಂಬಿದ್ದ ವಾಹನವನ್ನು ಮೂರು ಹೋಟೆಲ್ಗಳೊಳಗೆ ನುಗ್ಗಿಸಿದ್ದವನನ್ನೂಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಬಾಂಬ್ ಸ್ಫೋಟದಲ್ಲಿ 500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ’ ಎಂದು ಪೊಲೀಸ್ ವಕ್ತಾರ ರುವಾನ್ ಗುಣಶೇಖರ ಹೇಳಿದ್ದಾರೆ.
‘ಕೊಲಂಬೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿಇಟ್ಟಿದ್ದ ಸುಧಾರಿತ ಸ್ಫೋಟಕ ಸಾಧನವೊಂದನ್ನು ಭಾನುವಾರ ರಾತ್ರಿ ಪತ್ತೆ ಹಚ್ಚಲಾಗಿದೆ. ಅಲ್ಲದೆ, ಆರು ಅಡಿ ಉದ್ದದ ಕಚ್ಚಾ ಪೈಪ್ ಬಾಂಬ್ಗಳನ್ನೂಪತ್ತೆಹಚ್ಚಿನಿಷ್ಕ್ರಿಯಗೊಳಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.
ಭಾರತೀಯರ ಸಾವು:
‘ಸ್ಫೋಟದಲ್ಲಿ ಮೂವರು ಭಾರತೀಯರು ಸಾವಿಗೀಡಾಗಿದ್ದು, ಲಕ್ಷ್ಮಿ, ನಾರಾಯಣ ಚಂದ್ರಶೇಖರ ಮತ್ತು ರಮೇಶ ಎಂದು ಗುರುತಿಸಲಾಗಿದೆ’ ಎಂಬುದಾಗಿಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾನುವಾರ ಟ್ವೀಟ್ ಮಾಡಿದ್ದಾರೆ.
‘ಸ್ಫೋಟದಲ್ಲಿ ಕೆ.ಜಿ. ಹನುಮಂತರಾಯಪ್ಪ ಮತ್ತು ಎಂ. ರಂಗಪ್ಪ ಎಂಬುವರೂ ಸಾವಿಗೀಡಾಗಿದ್ದಾರೆ’ ಎಂದು ಶ್ರೀಲಂಕಾದಲ್ಲಿನ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.
‘ಘಟನೆಯಲ್ಲಿ ಕೇರಳದ ಪಿ.ಎಸ್. ರಸಿನಾ (58) ಮರಣವನ್ನಪ್ಪಿದ್ದಾರೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
37 ವಿದೇಶಿಗರ ಸಾವು:
ಸ್ಫೋಟದಲ್ಲಿ ಬ್ರಿಟನ್ನಮೂವರು, ಟರ್ಕಿಯ ಎಬ್ಬರು ಮತ್ತು ಪೋರ್ಚುಗಲ್ನ ಒಬ್ಬ ಪ್ರಜೆ ಸೇರಿದಂತೆವಿದೇಶಗಳ 37 ಜನ ಸಾವಿಗೀಡಾಗಿದ್ದಾರೆ ಸರ್ಕಾರ ಹೇಳಿದೆ.
‘ಮೃತಪಟ್ಟವರಲ್ಲಿ ಅಮೆರಿಕದ ಕೆಲವು ನಾಗರಿಕರೂ ಇದ್ದಾರೆ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದ್ದಾರೆ.
ಜಪಾನ್, ಚೀನಾದಕೆಲವರೂಸ್ಫೋಟಕ್ಕೆಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತ್ರಿಸದಸ್ಯ ಸಮಿತಿ ರಚನೆ
ಸರಣಿ ಬಾಂಬ್ ಸ್ಫೋಟ ಪ್ರಕರಣದ ತನಿಖೆ ನಡೆಸಲು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ತ್ರಿಸದಸ್ಯ ಸಮಿತಿಯನ್ನು ರಚಿಸಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿಜಿತ್ ಮಲಾಲಗೋಡ, ನಿವೃತ್ತ ಐಜಿಪಿ ಎನ್.ಕೆ. ಇಳಂಗಕೂನ್ ಮತ್ತು ಕಾನೂನು ಸಚಿವಾಲಯದ ಮಾಜಿ ಕಾರ್ಯದರ್ಶಿ ಪದಮಸಿರಿ ಜಯಮನ್ನೆ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಈ ಸಂಬಂಧ ಎರಡು ವಾರದೊಳಗೆ ಅಧ್ಯಕ್ಷರಿಗೆ ವರದಿ ಸಲ್ಲಿಸುವಂತೆಯೂ ಸಮಿತಿಗೆ ಸೂಚನೆ ನೀಡಲಾಗಿದೆ.
ಉಗ್ರರಿಗೆ ಗರಿಷ್ಠ ಶಿಕ್ಷೆಯಾಗಲಿ: ಮುಸ್ಲಿಂ ನಾಯಕರು
ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಿದವರಿಗೆ ‘ಗರಿಷ್ಠ ಶಿಕ್ಷೆಯಾಗಲಿ’ ಎಂದು ದೇಶದ ಮುಸ್ಲಿಂ ನಾಯಕರು ಸೋಮವಾರ ಆಗ್ರಹಿಸಿದ್ದಾರೆ.
ಸ್ಫೋಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗಿದ್ದಾರೆ. ಈ ನಡುವೆ, 24 ಶಂಕಿತ ಬಂಧಿತರ ಕುರಿತು ವಿವರ ನೀಡಲು ಸರ್ಕಾರ ನಿರಾಕರಿಸಿದೆ. ದೇಶದಲ್ಲಿ ಈ ವಿಷಯ ಕೋಮುಗಲಭೆಗೆ ಕಾರಣವಾಗಬಹುದು ಎಂಬ ಕಾರಣಕ್ಕೆ ಸರ್ಕಾರ ಈ ನಿರ್ಧಾರ ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಮುಸ್ಲಿಂ ನಾಯಕರು ಈ ರೀತಿ ಒತ್ತಾಯಿಸಿದ್ದಾರೆ.
‘ಸರ್ಕಾರ ಎಲ್ಲ ಧಾರ್ಮಿಕ ಸಂಸ್ಥೆಗಳಿಗೆ ಭದ್ರತೆ ಒದಗಿಸಬೇಕು. ಅದೇ ರೀತಿ, ಇಂತಹ ಉಗ್ರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರಿಗೆ ಗರಿಷ್ಠ ಶಿಕ್ಷೆಯೂ ಆಗಬೇಕು’ ಎಂದು ಮುಸ್ಲಿಂ ಧರ್ಮಶಾಸ್ತ್ರ ಮಂಡಳಿ ‘ಅಖಿಲ ಸಿಲೋನ್ ಜಾಮಿಯಾತ್ತುಲ್ ಉಲಾಮಾ’ ಹೇಳಿದೆ.
ಸೀಬರ್ಡ್ ನೌಕಾನೆಲೆಯಲ್ಲಿ ಭದ್ರತೆ ಹೆಚ್ಚಳ
ಕಾರವಾರ: ಶ್ರೀಲಂಕಾದ ವಿವಿಧೆಡೆ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಇಲ್ಲಿನ ಸೀಬರ್ಡ್ ನೌಕಾನೆಲೆಯ ಸುತ್ತಮುತ್ತ ಭದ್ರತೆ ಹೆಚ್ಚಿಸಲಾಗಿದೆ. ದಾಳಿಕೋರರು ಸಮುದ್ರ ಮಾರ್ಗದಿಂದ ಭಾರತದ ಭೂಪ್ರದೇಶವನ್ನು ಪ್ರವೇಶಿಸದಂತೆ ತಡೆಯಲು ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ದ್ವೀಪರಾಷ್ಟ್ರದಲ್ಲಿ ರಕ್ತಪಾತ ಮಾಡಿದ ಉಗ್ರರು ಸಮುದ್ರ ಮಾರ್ಗವಾಗಿ ತಪ್ಪಿಸಿಕೊಳ್ಳಲು ಯತ್ನಿಸಬಹುದು ಎಂಬ ವರದಿಗಳ ಹಿನ್ನೆಲೆಯಲ್ಲಿ ಇಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ನೌಕಾನೆಲೆಗೆ ಅಪರಿಚಿತರ ಪ್ರವೇಶವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಒಳಗೆ ಬರುವ ಮತ್ತು ಹೊರಗೆ ಹೋಗುವವರನ್ನು ಹೆಚ್ಚಿನ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ ಎಂದು ನೌಕಾನೆಲೆಯ ಅಧಿಕಾರಿಗಳು ತಿಳಿಸಿದ್ದಾರೆ.
***
‘ದಾಳಿಯ ಕುರಿತು ಗುಪ್ತಚರ ಸಂಸ್ಥೆ ಮೊದಲೇ ವರದಿ ನೀಡಿತ್ತು. ಆದರೆ, ತನಿಖಾ ಸಂಸ್ಥೆಗಳು ಈ ವರದಿಯನ್ನು ಏಕೆ ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಬಗ್ಗೆ ತನಿಖೆ ನಡೆಸಲಾಗುವುದು
ರನಿಲ್ ವಿಕ್ರಮಸಿಂಘೆ, ಶ್ರೀಲಂಕಾ ಪ್ರಧಾನಿ
ಇವನ್ನೂ ಓದಿ
ಲಂಕಾ ಸುತ್ತುವ ಮುನ್ನವೇ ಪ್ರಾಣ ಬಿಟ್ಟರು!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.