ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಕ್‌ ಬಳಿ ಸಾಕಷ್ಟು ಬಳೆ ಕೂಡ ಇಲ್ಲ: ಪ್ರಧಾನಿ ಮೋದಿ

Published 13 ಮೇ 2024, 14:22 IST
Last Updated 13 ಮೇ 2024, 14:22 IST
ಅಕ್ಷರ ಗಾತ್ರ

ಮುಜಾಫರನಗರ(ಬಿಹಾರ): ಪಾಕಿಸ್ತಾನದ ಬಳಿ ಇರುವ ಪರಮಾಣು ಅಸ್ತ್ರಗಳಿಗೆ ಹೆದರುತ್ತಿರುವ ವಿರೋಧ ಪಕ್ಷಗಳ ‘ಇಂಡಿಯಾ’ ಬಣದ ನಾಯಕರು ಹೇಡಿಗಳು ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.

ಮುಜಾಫರನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನವು ಪರಮಾಣು ಬಾಂಬ್ ಹೊಂದಿವೆ. ಬಳೆ ತೊಟ್ಟುಕೊಂಡು ಕುಳಿತಿಲ್ಲ ಎಂದು ಇತ್ತೀಚೆಗೆ ನ್ಯಾಶನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ನೀಡಿದ್ದ ಹೇಳಿಕೆಯನ್ನು ಅವರ ಹೆಸರು ಹೇಳದೆ ಮೋದಿ ಉಲ್ಲೇಖಿಸಿದರು.

‘ಇಂಡಿಯಾ ಬಣದ ನಾಯಕರು ಪಾಕಿಸ್ತಾನವನ್ನು ಕಂಡು ಬೆದರಿದಂತೆ ಕಾಣುತ್ತಿದ್ದಾರೆ. ಆ ದೇಶದ ಬಳಿ ಇರುವ ಅಣ್ವಸ್ತ್ರ ಅವರಿಗೆ ದುಃಸ್ವಪ್ನವಾಗಿದೆ’ಎಂದು ಮೋದಿ ಹೇಳಿದ್ದಾರೆ.

‘ಪಾಕಿಸ್ತಾನವು ಬಳೆ ತೊಡದಿದ್ದರೆ ನಾವು ಆ ದೇಶಕ್ಕೆ ಬಳೆ ತೊಡುವಂತೆ ಮಾಡುತ್ತೇವೆ. ಅವರಿಗೆ ತಿನ್ನಲು ಆಹಾರ ಧಾನ್ಯ ಇಲ್ಲವೆಂಬುದು ನನಗೆ ತಿಳಿದಿತ್ತು. ಈಗ ಅವರಿಗೆ ಅಗತ್ಯವಿರುವಷ್ಟು ಬಳೆಗಳ ಸರಬರಾಜು ಇಲ್ಲವೆಂಬುದು ತಿಳಿಯಿತು’ಎಂದು ವ್ಯಂಗ್ಯ ಮಾಡಿದ್ದಾರೆ.

‘ಭಯೋತ್ಪಾದನೆಯಲ್ಲಿ ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ಕೊಡುವ ಮತ್ತು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅನುಮಾನ ವ್ಯಕ್ತಪಡಿಸುವ ಹೇಡಿಗಳು ಮತ್ತು ಅಂಜುಬುರುಕರಂತೆ ಕಾಣುತ್ತಿರುವ ವಿರೋಧ ಪಕ್ಷಗಳ ನಾಯಕರ ಬಗ್ಗೆ ನಾವು ಜಾಗರೂಕರಾಗಿರಬೇಕು. ಇಂಡಿಯಾ ಬಣದಲ್ಲಿರುವ ಎಡಪಕ್ಷಗಳು ನಮ್ಮ ಅಣ್ವಸ್ತ್ರ ನಾಶಪಡಸಬೇಕು ಎನ್ನುತ್ತಿವೆ’ ಎಂದೂ ಮೋದಿ ಟೀಕಿಸಿದರು.

‘ಕೇಂದ್ರೀಯ ತನಿಖಾ ಸಂಸ್ಥೆಗಳ ಬಗ್ಗೆ ವಿರೋಧ ಪಕ್ಷಗಳು ಏಕೆ ಟೀಕಿಸುತ್ತವೆ ಎಂದರೆ, ಹಿಂದಿನ ಯುಪಿಎ ಅವಧಿಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗಳು ₹35 ಲಕ್ಷ ನಗದು ಮಾತ್ರ ಜಪ್ತಿ ಮಾಡಿದ್ದವು. ಅದನ್ನು ಸ್ಕೂಲ್ ಬ್ಯಾಗ್‌ನಲ್ಲಿ ತೆಗೆದುಕೊಂಡು ಹೋಗಬಹುದು. ಆದರೆ, ನಮ್ಮ ಆಡಳಿತಾವಧಿಯಲ್ಲಿ 70 ಚಿಕ್ಕ ಟ್ರಕ್‌ಗಳಲ್ಲಿ ತುಂಬಬಹುದಾದಂತಹ ₹2,2000 ಕೋಟಿ ಅಕ್ರಮ ಹಣ ವಶಪಡಿಸಿಕೊಂಡಿದ್ದೇವೆ’ ಎಂದಿದ್ದಾರೆ.

ಕಾಂಗ್ರೆಸ್ ಮತ್ತು ಆರ್‌ಜೆಡಿ ಅಧಿಕಾರದಲ್ಲಿದ್ದಾಗ ಸುಲಿಗೆ, ಅಪಹರಣದಂತಹ ಕೃತ್ಯಗಳಿಗೆ ಅನುವು ಮಾಡಿಕೊಟ್ಟಿದ್ದವು. ವೋಟ್‌ ಬ್ಯಾಂಕ್‌ ಭದ್ರಪಡಿಸಿಕೊಳ್ಳಲು ಮುಸ್ಲಿಮರಿಗೆ ಮೀಸಲಾತಿ ನೀಡಿದ್ದರು. ಇನ್ನುಮುಂದೆ, ನಾನು ಜೀವಂತ ಇರುವವರೆಗೂ ಅಂತಹದ್ದಕ್ಕೆ ಮತ್ತೆ ಅವಕಾಶ ಕೊಡಲ್ಲ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT