ಠಾಣೆ: ಎರಡು ಅಂತಸ್ತಿನ ಗೋದಾಮು ಕುಸಿದು ಕನಿಷ್ಠ ಇಬ್ಬರು ಮೃತಪಟ್ಟು, ಹತ್ತು ಮಂದಿ ಗಾಯಗೊಂಡ ಘಟನೆ ಇಲ್ಲಿನ ಭಿವಂಡೀ ನಗರದಲ್ಲಿ ಶನಿವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಮಧ್ಯಾಹ್ನ 1.45ರ ಸುಮಾರಿಗೆ ಘಟನೆ ನಡೆದಿದ್ದು, ಎರಡು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ ಕನಿಷ್ಠ 10–15 ಮಂದಿ ಭಗ್ನಾವಶೇಷದಡಿ ಸಿಲುಕಿರುವ ಸಾಧ್ಯತೆ ಇದೆ’ ಎಂದು ಠಾಣೆ ಮಹಾನಗರ ಪಾಲಿಕೆ ಪ್ರಾದೇಶಿಕ ವಿಪತ್ತು ನಿರ್ವಹಣೆ ವಿಭಾಗದ ಮುಖ್ಯಸ್ಥ ಅವಿನಾಶ್ ಸಾವಂತ್ ತಿಳಿಸಿದ್ದಾರೆ.
ಕಟ್ಟಡದ ಕೊನೆಯ ಅಂತಸ್ತಿನಲ್ಲಿ ನಾಲ್ಕು ಮಂದಿಯನ್ನು ಒಳಗೊಂಡ ಕುಟುಂಬ ವಾಸಿಸುತ್ತಿತ್ತು. ಕೆಳ ಅಂತಸ್ತಿನಲ್ಲಿ ಹಲವು ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ಅವರು ತಿಳಿಸಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯ ಎರಡು ತಂಡ ಮತ್ತು ರಾಜ್ಯ ವಿಪತ್ತು ನಿರ್ವಹಣೆ ಪಡೆಯ ಒಂದು ತಂಡ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ ಗೋದಾಮು ಹತ್ತು ವರ್ಷ ಹಳೆಯದ್ದು ಎಂದು ತಿಳಿದುಬಂದಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.