ಪುಣೆ: ಅಹ್ಮದ್ನಗರ ಜಿಲ್ಲೆಯ ರಾಹುರಿ ನಗರದಲ್ಲಿ ಸ್ಥಳೀಯ ವಾರಪತ್ರಿಕೆ ನಡೆಸುತ್ತಿದ್ದ ಪತ್ರಕರ್ತ ರೋಹಿದಾಸ್ ದಾತಿರ್ ಎಂಬುವವರನ್ನು ಅಪಹರಿಸಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೋಹಿದಾಸ್ ಅವರು ಮಂಗಳವಾರ ತಮ್ಮ ದ್ವಿಚಕ್ರ ವಾಹನದಲ್ಲಿ ರಾಹುರಿ ನಗರದ ಕಾಲೇಜು ರಸ್ತೆಯಲ್ಲಿ ಹೋಗುತ್ತಿದ್ದಾಗ ಅಪಹರಿಸಲಾಗಿದೆ. ಅಂದು ತಡರಾತ್ರಿ ಅದೇ ಪ್ರದೇಶದಲ್ಲಿ ತೀವ್ರ ಗಾಯಗೊಂಡಿರುವ ರೀತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ರಾಹುರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಗಣೇಶ್ ಶೆಲ್ಕೆ ತಿಳಿಸಿದ್ದಾರೆ.
ಮೃತ ಪತ್ರಕರ್ತ ರಾಹುರಿಯಲ್ಲಿ ವಾರಪತ್ರಿಕೆ ನಡೆಸುತ್ತಿದ್ದು, ಆರ್ಟಿಐ ಕಾರ್ಯಕರ್ತರಾಗಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ದಾತಿರ್ ಅಪಹರಣ ಮತ್ತು ಕೊಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ವ್ಯಕ್ತಿಯೊಬ್ಬನನ್ನು ಗುರುತಿಸಲಾಗಿದೆ. ಹಳೆಯ ವೈಷಮ್ಯದಿಂದ ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.