ಛತ್ರಪತಿ ಸಂಭಾಜಿನಗರ: ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ತೀವ್ರಗೊಂಡಿದ್ದು, ಎನ್ಸಿಪಿ ಶಾಸಕ ಪ್ರಕಾಶ್ ಸೋಲಂಕಿ ಅವರ ನಿವಾಸಕ್ಕೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಪೊಂದು ಸೋಮವಾರ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಾಜಲಗಾವ್ನಲ್ಲಿರುವ ಸೋಲಂಕಿ ಅವರ ನಿವಾಸಕ್ಕೆ ಬೆಂಕಿ ಹಚ್ಚಿ, ಅಲ್ಲೇ ಇದ್ದ ಕಾರಿಗೂ ಬೆಂಕಿ ಇಟ್ಟಿದೆ ಎಂದು ಹೇಳಿದ್ದಾರೆ.
ಪುರಸಭೆ ಕಟ್ಟಡ, ಶಾಸಕರ ಕಚೇರಿ ಧ್ವಂಸ:
‘ಸೋಲಂಕಿ ಅವರ ನಿವಾಸಕ್ಕೆ ಬೆಂಕಿ ಇಟ್ಟ ನಂತರ ಪ್ರತಿಭಟನಕಾರರು ಮಾಜಲಗಾವ್ ಪುರಸಭೆ ಕಟ್ಟಡದ ಮೊದಲ ಅಂತಸ್ತಿಗೆ ಬೆಂಕಿ ಹಚ್ಚಿ, ಧ್ವಂಸಗೊಳಿಸಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ದುಷ್ಕರ್ಮಿಗಳ ಪತ್ತೆಗಾಗಿ ಪೊಲಿಸರು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ’.
‘ಅಷ್ಟೆ ಅಲ್ಲದೆ, ಬಿಜೆಪಿ ಶಾಸಕ ಪ್ರಶಾಂತ್ ಬಂಬ್ ಅವರ ಛತ್ರಪತಿ ಸಂಭಾಜಿನಗರದಲ್ಲಿರುವ ಕಚೇರಿಯನ್ನೂ ಧ್ವಂಸಗೊಳಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಲಂಕಿ ಅವರು, ಮರಾಠ ಮೀಸಲಾತಿ ಚಳವಳಿ ಮತ್ತು ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹೋರಾಟಗಾರ ಮನೋಜ್ ಜರಾಂಗೆ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ ಎನ್ನಲಾದ ಆಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಬೆನ್ನಲ್ಲೇ ಗುಂಪೊಂದು ದಾಳಿ ನಡೆಸಿದೆ.
ಸುದ್ದಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಸೋಲಂಕಿ, ‘ಘಟನೆ ವೇಳೆ ಮಾಜಲಗಾವ್ ನಿವಾಸದಲ್ಲಿಯೇ ಇದ್ದೆ. ಪ್ರತಿಭಟನಕಾರರು ಎಲ್ಲಾ ಕಡೆಯಿಂದ ಮನೆಯನ್ನು ಸುತ್ತುವರಿದರು. ಯಾರೂ ನಮ್ಮ ಮಾತು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಮನೆ ಮೇಲೆ ಕಲ್ಲು ತೂರಾಟ ನಡೆಸಿದರು, ವಾಹನಕ್ಕೆ ಬೆಂಕಿ ಇಟ್ಟರು. ಮರಾಠ ಮೀಸಲಾತಿ ಹೋರಾಟಗಾರರ ಪರ ನಾನು ನಿಲ್ಲುತ್ತೇನೆ. ಮರಾಠ ಸಮುದಾಯದ ನೆರವಿನಿಂದಲೇ ನಾಲ್ಕು ಬಾರಿ ಚುನಾವಣೆಯಲ್ಲಿ ಗೆದ್ದಿದ್ದೇನೆ. ನಾನೊಬ್ಬ ಮರಾಠ ಶಾಸಕ’ ಎಂದು ಹೇಳಿದರು.
ಸೋಲಂಕಿ ಅವರದ್ದು ಎನ್ನಲಾದ ಆಡಿಯೊದಲ್ಲಿ, ‘ವಿಷಯವು (ಮರಾಠ ಮೀಸಲಾತಿಗೆ ಆಗ್ರಹಿಸಿ ಸರ್ಕಾರಕ್ಕೆ ಗಡುವು ನೀಡಿರುವುದು) ಮಕ್ಕಳಾಟದಂತಿದೆ. ಗ್ರಾಮ ಪಂಚಾಯಿತಿ ಚುನಾವಣೆಗೂ ಸ್ಪರ್ಧಿಸದ ವ್ಯಕ್ತಿ ಈಗ ಸ್ಮಾರ್ಟ್ ವ್ಯಕ್ತಿಯಾಗಿದ್ದಾರೆ’ ಎಂದು ಹೇಳಲಾಗಿದೆ.
ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಹಿಂದುಳಿದ ವರ್ಗಗಳ (ಒಬಿಸಿ) ಅಡಿಯಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿ ಮರಾಠ ಸಮುದಾಯದ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಜರಾಂಗೆ ಅವರು ಅಕ್ಟೋಬರ್ 25ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಬಳಿಕ ಹೋರಾಟ ತೀವ್ರಗೊಂಡಿದೆ.
ಆರೋಗ್ಯ ತಪಾಸಣೆಗೆ ಜರಾಂಗೆ ನಿರಾಕರಣೆ: ಮರಾಠ ಮೀಸಲಿಗೆ ಆಗ್ರಹಿಸಿ ಜಲ್ನಾ ಜಿಲ್ಲೆಯಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹೋರಾಟಗಾರ ಮನೋಜ್ ಜರಾಂಗೆ ಅವರು ತಮ್ಮ ಆರೋಗ್ಯ ತಪಾಸಣೆಗೆ ನಿರಾಕರಿಸಿದ್ದಾರೆ.
‘ಉಪವಾಸದಿಂದ ಮೂತ್ರಪಿಂಡ, ಮೆದುಳು ಸೇರಿದಂತೆ ಪ್ರಮುಖ ಅಂಗಾಗಗಳ ಮೇಲೆ ಪರಿಣಾಮ ಬೀರಬಹುದು’ ಎಂದು ಪ್ರಭಾರ ಜಿಲ್ಲಾ ಶಸ್ತ್ರಚಿಕಿತ್ಸಕ ಪ್ರತಾಪ್ ಘೋಡ್ಕೆ ಹೇಳಿದ್ದಾರೆ.
‘ಜಿಲ್ಲಾ ಅಧಿಕಾರಿಗಳು ಮತ್ತು ವೈದ್ಯರು ಪ್ರತಿ 2–3 ಗಂಟೆಗೆ ಒಮ್ಮೆ ಜರಾಂಗೆ ಅವರ ಆರೋಗ್ಯ ತಪಾಸಣೆಗೆ ಮುಂದಾಗುತ್ತಿದ್ದಾರೆ. ಆದರೆ, ಪ್ರತಿ ಬಾರಿಯೂ ಅವರು ತಪಾಸಣೆಗೆ ನಿರಾಕರಿಸುತ್ತಾರೆ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.