ಠಾಣೆ: ಮಹಾರಾಷ್ಟ್ರದ ರಾಜಕಾರಣವು ಕೆಸರಿನಂತೆ ಕಾಣುತ್ತಿದ್ದು, ಪಕ್ಷ ರಾಜಕಾರಣವು ಮಂಕಾಗುತ್ತಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಅವರು ಶನಿವಾರ ಹೇಳಿದರು.
ಲೋಕಸಭೆ ಚುನಾವಣೆ ಸನ್ನಿಹಿತವಾಗುತ್ತಿರುವ ವೇಳೆ ತಾವು ಕೈಗೊಂಡಿರುವ ರಾಜ್ಯವ್ಯಾಪಿ ಪ್ರವಾಸದ ಭಾಗವಾಗಿ ಕಲ್ಯಾಣ್ಗೆ ಭೇಟಿ ನೀಡಿದ್ದ ಅವರು ಸುದ್ದಿಗಾರರ ಎದುರು ಹೀಗೆ ಹೇಳಿದರು. ರಾಜಕಾರಣಿಗಳು ಮಾಡುವ ತಪ್ಪಿಗೆ ಅವರನ್ನೇ ಜನರು ಹೊಣೆಗಾರರನ್ನಾಗಿ ಮಾಡಬೇಕು ಎಂದರು.
ಎಂಎನ್ಎಸ್ ಪಕ್ಷವು ಎನ್ಡಿಎ ಮೈತ್ರಿಕೂಟ ಸೇರಲಿದೆ ಎಂಬ ಊಹಾಪೋಹಗಳು ಹರಿದಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ, ಒಂದು ಪಕ್ಷದ ನಾಯಕರು ಮತ್ತೊಂದು ಪಕ್ಷದ ನಾಯಕರನ್ನು ಭೇಟಿಯಾದ ಕೂಡಲೇ ಮೈತ್ರಿಕೂಟ ರಚನೆಯಾಗುತ್ತಿದೆ ಎಂದು ಅರ್ಥವಲ್ಲ ಎಂದರು.
ಮರಾಠ ಮೀಸಲಾತಿ ವಿವಾದದ ಕುರಿತು ಮಾತನಾಡಿದ ಅವರು, ‘ಬರ, ನಿರುದ್ಯೋಗ, ಕೃಷಿ ಸಮಸ್ಯೆಗಳ ಬದಲಾಗಿ ಈಗ ಜಾತಿ ರಾಜಕೀಯದ ಕಡೆ ಗಮನ ಹರಿಸಲಾಗುತ್ತಿದೆ’ ಎಂದರು. ಜೊತೆಗೆ, ಚುನಾವಣಾ ಕರ್ತವ್ಯಕ್ಕೆ ಶಿಕ್ಷಕರನ್ನು ನೇಮಿಸುವ ಚುನಾವಣಾ ಆಯೋಗದ ನಿರ್ಧಾರವನ್ನು ಟೀಕಿಸಿದರು.