ಥಾಣೆ: ಮಹಾರಾಷ್ಟ್ರದ ಥಾಣೆಯಲ್ಲಿ ನವರಾತ್ರಿ ಆಚರಣೆ ಪ್ರಯುಕ್ತ ದುರ್ಗಾ ಮಾತೆ ಮೂರ್ತಿ ಮೆರವಣಿಗೆ ವೇಳೆ ಪಟಾಕಿ ಸಿಡಿಸುವ ವಿಚಾರಕ್ಕೆ ಎರಡು ಗುಂಪಿನ ನಡುವೆ ವಾಗ್ವಾದ ನಡೆದಿದೆ. ಇದೇ ವೇಳೆ ಪಟಾಕಿ ಕಿಡಿ ತಗುಲಿ ನಾಲ್ಕು ಮಂದಿಗೆ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಗಾಯಾಳುಗಳು ಶ್ರೀನಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
9 ದಿನಗಳ ನವರಾತ್ರಿ ಉತ್ಸವ ಭಾನುವಾರ ಆರಂಭವಾಗಿದೆ. ರಾತ್ರಿ 9ರ ಸುಮಾರಿಗೆ ಹನುಮಾನ್ ನಗರ ಪ್ರದೇಶದಲ್ಲಿ ದೇವಿ ಮೂರ್ತಿ ಮೆರವಣಿಗೆ ಸಾಗಿತ್ತು. ಈ ವೇಳೆ ಪಟಾಕಿ ಸಿಡಿಸುವ ವಿಚಾರವಾಗಿ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಗಲಾಟೆ ವೇಳೆ ಕೆಲವರು ಅಜಾಗರೂಕವಾಗಿ ಪಟಾಕಿ ಸಿಡಿಸಿದ್ದು, ಸ್ಥಳದಲ್ಲಿದ್ದ ನಾಲ್ಕು ಮಂದಿಗೆ ಗಾಯಗಳಾಗಿವೆ. ಕಲ್ಲು ತೂರಾಟವೂ ನಡೆದಿದೆ. ಇದರಿಂದ ವ್ಯಕ್ತಿಯೊಬ್ಬರಿಗೆ ಗಾಯವಾಗಿದೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.