ಮಣಿಪುರದ ಎಲ್ಲಾ ಪಕ್ಷಗಳ ಮುಖಂಡರ ಜಂಟಿ ನಿಯೋಗ ದೆಹಲಿಗೆ ಬಂದು ಪ್ರಧಾನಿಯನ್ನು ಭೇಟಿ ಮಾಡಲು ಸಮಯ ಕೋರಿದೆ. ಆದರೆ ಇಲ್ಲಿಯವರೆಗೆ ಅವರು ಸಮಯ ನೀಡಿಲ್ಲ ಎಂದು ಪ್ರಿಯಾಂಕ ಹೇಳಿದ್ದಾರೆ.
ಪ್ರಧಾನಿ ಅವರು ಮಣಿಪುರಕ್ಕೆ ಹೋಗಿಲ್ಲ, ಅಲ್ಲಿನ ಹಿಂಸಾಚಾರದ ಬಗ್ಗೆ ಮಾತನಾಡಿಲ್ಲ. ಸಂಸತ್ತಿನಲ್ಲಿ ಉತ್ತರವನ್ನೂ ನೀಡಿಲ್ಲ. ಯಾವುದೇ ಕ್ರಮವನ್ನೂ ತೆಗೆದುಕೊಂಡಿಲ್ಲ. ಮಣಿಪುರಕ್ಕೆ ಬೇಕಾಗಿರುವುದು ಇಂತಹ ನಾಯಕತ್ವವೇ ಎಂದು ಪ್ರಿಯಾಂಕ ಕಿಡಿಕಾರಿದ್ದಾರೆ.
ಸರ್ಕಾರ ವಿಳಂಬ ಮಾಡದೆ ಮಣಿಪುರದ ಎಲ್ಲಾ ಮಧ್ಯಸ್ಥಗಾರರೊಂದಿಗೆ ಮಾತನಾಡುವ ಮೂಲಕ ರಾಜ್ಯದಲ್ಲಿ ಸ್ಥಿರತೆ ಮತ್ತು ಶಾಂತಿಯನ್ನು ಕಾಪಾಡಲು ಗಟ್ಟಿ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
2023ರ ಮೇ 3ರಂದು ಮಣಿಪುರದಲ್ಲಿ ಆರಂಭವಾದ ಜನಾಂಗೀಯ ಹಿಂಸಾಚಾರಕ್ಕೆ ಈವರೆಗೆ ಸುಮಾರು 180ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.