ಆಗ್ರಾ/ಫಿರೋಜಾಬಾದ್: ಆಗ್ರಾದಲ್ಲಿ ಮಂಗಳವಾರ ರಾತ್ರಿ ನಡೆದಿದ್ದ ಬಸ್ ಅಪಹರಣ ಪ್ರಕರಣದ ಪ್ರಮುಖ ಆರೋಪಿ ಪ್ರದೀಪ್ ಗುಪ್ತಾನನ್ನು ಉತ್ತರ ಪ್ರದೇಶ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಜೈಪುರ ಮೂಲದ ಗುಪ್ತಾ, ಆಗ್ರಾದಲ್ಲಿ ನೆಲೆಸಿದ್ದಾನೆ. ಆತ ಪ್ರಕರಣದ ‘ಮಾಸ್ಟರ್ ಮೈಂಡ್’ ಎಂದು ಹೇಳಲಾಗಿದೆ. ಗುಪ್ತಾ, ಇಟಾವಾದಲ್ಲಿರುವ ಆರ್ಟಿಒ ಕಚೇರಿಯಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದಾನೆ.
‘ಗುಪ್ತಾ ಹಾಗೂ ಆತನ ಸಹಚರ ಯತೇಂದರ್ ಯಾದವ್, ಫಿರೋಜಾಬಾದ್ ಜಿಲ್ಲೆಯ ಫತೆಹಾಬಾದ್ ಸಮೀಪದ ಹಳ್ಳಿಯ ಬಳಿ ಬೈಕ್ನಲ್ಲಿ ಹೋಗುತ್ತಿದ್ದರು. ಆ ಭಾಗದಲ್ಲಿ ಮುಂಜಾನೆ 5ಗಂಟೆಗೆ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರನ್ನು ಕಂಡೊಡನೆ ಆರೋಪಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ಪ್ರತಿದಾಳಿ ನಡೆಸಿದ್ದು ಘಟನೆಯಲ್ಲಿ ಗುಪ್ತಾಗೆ ಗಾಯವಾಗಿದೆ. ಯತೇಂದರ್ ತಪ್ಪಿಸಿಕೊಂಡಿದ್ದಾನೆ. ಯತೇಂದರ್ ಹಾಗೂ ಇತರ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದು ಶೀಘ್ರವೇ ಅವರನ್ನು ವಶಕ್ಕೆ ಪಡೆಯುತ್ತೇವೆ’ ಎಂದು ಆಗ್ರಾದ ಪೊಲೀಸ್ ವರಿಷ್ಠಾಧಿಕಾರಿ ಬಬ್ಲೂ ಕುಮಾರ್ ತಿಳಿಸಿದ್ದಾರೆ.
‘ಆರೋಪಿಗಳ ಬಂಧನಕ್ಕೆ ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಆಗ್ರಾ, ಫಿರೋಜಾಬಾದ್, ಇಟಾವಾ, ಮೇನ್ಪುರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.