ಐಜ್ವಾಲ್: ‘ಅಸ್ಸಾಂನ ಬರಾಕ್ ಪ್ರದೇಶದಲ್ಲಿ ಜನರು ಹೇರಿರುವ ಆರ್ಥಿಕ ನಿರ್ಬಂಧದಿಂದಾಗಿ ಮಿಜೋರಾಂಗೆ ಸರಬರಾಜು ಆಗುವ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ತೊಂದರೆ ಉಂಟಾಗುವ ಸಾಧ್ಯತೆಗಳು ಕಡಿಮೆ’ ಎಂದು ಆಹಾರ ಸಚಿವ ಕೆ.ಲಾಲ್ರಿನ್ಲಿಯನಾ ಗುರುವಾರ ಹೇಳಿದರು
ಮಿಜೋರಾಂ ರಾಜ್ಯವು ಅಸ್ಸಾಂ ಮಾತ್ರವಲ್ಲದೇ ಮಣಿಪುರ(95 ಕಿ.ಮೀ) ಮತ್ತು ತ್ರಿಪುರಾದೊಂದಿಗೂ (66 ಕಿ.ಮೀ) ಅಂತರ ರಾಜ್ಯ ಗಡಿಯನ್ನು ಹಂಚಿಕೊಂಡಿದೆ. ಆರಾಜ್ಯಗಳಿಂದ ಅಗತ್ಯ ವಸ್ತುಗಳಾದ ತೈಲ, ಅಡುಗೆ ಅನಿಲ, ಅಕ್ಕಿ ಸೇರಿದಂತೆ ಇತರೆ ವಸ್ತುಗಳನ್ನು ಸಾಗಣೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರವು ಬುಧವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ತ್ರಿಪುರಾದಿಂದ ತರಿಸಲು ಪ್ರಾರಂಭಿಸಿದೆ ಎಂದು ಅವರು ತಿಳಿಸಿದರು.
‘ತೈಲದ ಕೆಲವು ಟ್ಯಾಂಕರ್ಗಳು ತ್ರಿಪುರಾದಿಂದ ಐಜ್ವಾಲ್ಗೆ ಶುಕ್ರವಾರ ಆಗಮಿಸುವ ಸಾಧ್ಯತೆಗಳಿವೆ. ಅಲ್ಲದೆ ಅಗರ್ತಲಾದಿಂದ ಎಣ್ಣೆ ಮತ್ತು ಎಲ್ಪಿಜಿಯನ್ನು ಸಾಗಿಸಲು ನಾಲ್ಕು ಟ್ರಕ್ಗಳು ಮತ್ತು ಏಳು ತೈಲದ ಟ್ಯಾಂಕರ್ಗಳನ್ನು ಕಳುಹಿಸುತ್ತಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.
‘ಈಗಾಗಲೇ ಮೂರು ತಿಂಗಳಿಗಾಗುವಷ್ಟು ಅಕ್ಕಿಯನ್ನು ದಾಸ್ತಾನು ಮಾಡಲಾಗಿದೆ. ಇತರೆ ಅವಶ್ಯಕ ವಸ್ತುಗಳು ಕೂಡ ಮಿಜೋರಾಂಗೆ ಬರಲಿವೆ. ಈಗಾಗಲೇ ತ್ರಿಪುರಾದ ಕೆಲವು ವ್ಯಾಪಾರಿಗಳು ಮಿಜೋರಾಂ ಪ್ರವೇಶಿಸಿದ್ದಾರೆ. ಸದ್ಯ ರಾಜ್ಯ ಸರ್ಕಾರವು ಎಲ್ಪಿಜಿ ಮತ್ತು ತೈಲದ ಸಾಗಣೆಗೆ ಸಂಬಂಧಿಸಿದಂತೆ ಮಣಿಪುರದ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ’ ಎಂದು ಅವರು ತಿಳಿಸಿದರು.
‘ಅಸ್ಸಾಂನಲ್ಲಿ ಹೇರಲಾಗಿರುವ ನಿರ್ಬಂಧದಿಂದಾಗಿ ಸದ್ಯ ಯಾವುದೇ ತೊಂದರೆಗಳಾಗಿಲ್ಲ. ಮಿಜೋರಾಂನಲ್ಲಿ ಯಾವುದೇ ಬಂದ್ ನಡೆಸಿಲ್ಲ. ದೊಡ್ಡ ಟ್ರಕ್ಗಳು ನಿರಂತರವಾಗಿ ಅಸ್ಸಾಂಗೆ ಹೋಗುತ್ತಿವೆ. ಆದರೆ, ಕಳೆದ ಎರಡು ದಿನಗಳಿಂದ ಅಸ್ಸಾಂನಿಂದ ಮಿಜೋರಾಂಗೆ ಯಾವುದೇ ವಾಹನಗಳು ಪ್ರವೇಶಿಸಿಲ್ಲ’ ಎಂದು ಅವರು ಹೇಳಿದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.