ನವದೆಹಲಿ: ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಶನಿವಾರ ಪ್ರಯಾಣಿಕ ರೈಲು ಸೇವೆ, ರುಪೇ ಪಾವತಿ ಕಾರ್ಡ್ ವ್ಯವಸ್ಥೆಯನ್ನು ಜಂಟಿಯಾಗಿ ಉದ್ಘಾಟಿಸಿದ್ದಾರೆ.
ಭಾರತದ ಅನುದಾನದಲ್ಲಿ ಜೈನಗರ ಮತ್ತು ನೇಪಾಳದ ಕುರ್ತಾ ನಡುವಣ ರೈಲ್ವೆ ಜಾಲಕ್ಕೆ ಚಾಲನೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ವಿದ್ಯುತ್ ಪ್ರಸರಣ ಮಾರ್ಗ ಉದ್ಘಾಟಿಸಲಾಯಿತು. ರೈಲ್ವೆ ಹಾಗೂ ಇಂಧನ ವಲಯದಲ್ಲಿ ಸಹಕಾರ ವಿಸ್ತರಿಸಲು ಉಭಯ ಕಡೆಯವರು ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿದರು.
ಉಭಯ ದೇಶಗಳ ನಾಯಕರು ಭೇಟಿಯಾಗಿ ಸಭೆ ನಡೆಸಿ ದ್ವಿಪಕ್ಷೀಯ ಸಂಬಂಧ ವೃದ್ಧಿಗಾಗಿ ಒತ್ತು ನೀಡಿದರು.
ಗಡಿ ವಿವಾದ ಬಗ್ಗೆ ಚರ್ಚೆ... ಗಡಿ ವಿವಾದ ಬಗ್ಗೆ ಚರ್ಚೆ ನಡೆಸಲಾಗಿದ್ದು, ದ್ವಿಪಕ್ಷೀಯ ಮಾತುಕತೆ ಮೂಲಕ ಬಗೆಹರಿಸಲು ಭಾರತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಲಾಗಿದೆ ಎಂದು ನೇಪಾಳ ಪ್ರಧಾನಿ ಮಾಧ್ಯಮಗಳಿಗೆ ನೀಡಿರುವ ಪ್ರಕಟಣೆ ತಿಳಿಸಿದೆ.
ಭಾರತ ಹಾಗೂ ನೇಪಾಳ ನಡುವಣ ಬಾಂಧವ್ಯ ಅನನ್ಯವಾಗಿದ್ದು, ಇಂತಹ ಸೌಹಾರ್ದ ಜಗತ್ತಿನಲ್ಲಿ ಬೇರೆ ಎಲ್ಲೂ ಕಾಣಸಿಗುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.