ನವದೆಹಲಿ: ನೈರುತ್ಯ ಮುಂಗಾರು ಮಾರುತಗಳು ಗುರುವಾರ ಕೇರಳ ಪ್ರವೇಶಿಸಿವೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಖಚಿತಪಡಿಸಿದೆ.
ನೈರುತ್ಯ ಮುಂಗಾರು ಸಾಮಾನ್ಯ ವಾಗಿ ಜೂನ್ 1ರಂದು ಕೇರಳ ಪ್ರವೇಶಿಸುವುದು ವಾಡಿಕೆ. ಈ ಬಾರಿ ಒಂದು ವಾರ ತಡವಾಗಿ ಪ್ರವೇಶಿಸಿದೆ. ಈ ಬಾರಿ ಮುಂಗಾರು ಜೂನ್ 4ರಂದು ಕೇರಳ ಪ್ರವೇಶಿಸಬಹುದು ಎಂದು ಐಎಂಡಿಯು ಮೇ ತಿಂಗಳ ಮಧ್ಯದಲ್ಲಿ ಮುನ್ಸೂಚನೆ ನೀಡಿತ್ತು. ಹಿಂದಿನ ವರ್ಷ ಮುಂಗಾರು ಮೇ 29ಕ್ಕೆ ಕೇರಳ ಪ್ರವೇಶಿಸಿತ್ತು.
ದಕ್ಷಿಣ ಅರಬ್ಬಿ ಸಮುದ್ರದ ಉಳಿದ ಭಾಗಗಳಲ್ಲಿ ಮತ್ತು ಅರಬ್ಬಿ ಸಮುದ್ರದ ಮಧ್ಯ ಭಾಗದ ಕೆಲವೆಡೆ, ಲಕ್ಷದ್ವೀಪ ದಾದ್ಯಂತ, ಕೇರಳ ಮತ್ತು ದಕ್ಷಿಣ ತಮಿಳುನಾಡಿನ ಬಹುತೇಕ ಭಾಗಗಳು, ಕೊಮೊರಿನ್ ಪ್ರದೇಶ, ಮನ್ನಾರ್ ಕೊಲ್ಲಿ ಮತ್ತು ಪಶ್ಚಿಮ ಬಂಗಾಳಕೊಲ್ಲಿಯ ಇನ್ನೂ ಕೆಲವು ಭಾಗಗಳಲ್ಲಿ ಮುಂಗಾರು ಮಾರುತಗಳು ಚುರುಕುಗೊಂಡಿವೆ ಎಂದು ಐಎಂಡಿ ಹೇಳಿಕೆ ಬಿಡುಗಡೆ ಮಾಡಿದೆ. ಬಿಪೊರ್ಜಾಯ್ ಚಂಡ ಮಾರುತವು ಮುಂಗಾರು ತೀವ್ರತೆಯ ಮೇಲೆ ಪರಿಣಾಮ ಬೀರಲಿದೆ.